ಜೋಧ್ಪುರ: ರಾಜಸ್ಥಾನದ ಜಲೋರ್ ಜಿಲ್ಲೆಯ ರಾಣಿವಾರಾದಲ್ಲಿ ಐದು ವರ್ಷದ ಬಾಲಕಿಯೊಬ್ಬಳು ಬಾಯಾರಿಕೆಯಿಂದ ಸಾವನ್ನಪ್ಪಿದ್ದರೆ, ಆಕೆಯ ಅಜ್ಜಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ರೋಡಾ ಗ್ರಾಮದಲ್ಲಿ ಕುಟುಂಬ ಸದಸ್ಯರನ್ನು ನೋಡಲು ಸುಖಿ (60) ಮತ್ತು ಅವರ ಮೊಮ್ಮಗಳು ಮಂಜು (5) ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಠಾಣಾಧಿಕಾರಿ ಪದ್ಮಾ ರಾಮ್ ತಿಳಿಸಿದ್ದಾರೆ.
ದಾರಿಯಲ್ಲಿರುವಾಗ ಅವರಿಗೆ ಬಾಯಾರಿಕೆಯಾಗಿದೆ. ಆದರೆ ಸ್ಥಳದಲ್ಲಿ ಜನವಸತಿ ಇಲ್ಲದ ಕಾರಣ ಸುತ್ತ ಎಲ್ಲೂ ನೀರು ಸಿಕ್ಕಿಲ್ಲ. ನಂತರ, ಕೆಲವರು ಈ ಇಬ್ಬರು ಸಣ್ಣ ಬೆಟ್ಟದ ಮೇಲಿರುವುದನ್ನು ಗುರುತಿಸಿ ಗ್ರಾಮದ ಸರಪಂಚರಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
‘ನಾವು ವಾಹನ ಸಂಚರಿಸಲಾರದ ಸ್ಥಳಕ್ಕೆ ಹೋದಾಗ, ವೃದ್ಧೆ ನಿರ್ಜಲೀಕರಣದಿಂದಾಗಿ ಪ್ರಜ್ಞಾಹೀನಳಾಗಿದ್ದು, ಬಾಲಕಿ ಮೃತಪಟ್ಟಿರುವುದು ಕಂಡುಬಂದಿದೆ. ಮರಣೋತ್ತರ ಪರೀಕ್ಷೆಯ ನಂತರ ಬಾಲಕಿಯ ಮೃತ ದೇಹವನ್ನು ಆಕೆಯ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.