
ಸಾವು (ಪ್ರಾತಿನಿಧಿಕ ಚಿತ್ರ)
ಭುವನೇಶ್ವರ (ಪಿಟಿಐ): ತಂದೆಯ ಮೃತದೇಹ ಹಾಗೂ ಪ್ರಜ್ಞಾಹೀನರಾದ ತಾಯಿಯ ಜೊತೆ ಮೈ ಕೊರೆಯುವ ಚಳಿಯಲ್ಲಿ 5 ವರ್ಷದ ಬಾಲಕನೊಬ್ಬ ಇಡೀ ರಾತ್ರಿ ಕಳೆದ ಘಟನೆ ಒಡಿಶಾದಲ್ಲಿ ಭಾನುವಾರ ನಡೆದಿದೆ.
ಇಲ್ಲಿನ ದೇವಗಢ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ರಸ್ತೆ ಬದಿಯಲ್ಲಿ ಸಾಗುತ್ತಿದ್ದ ದಾರಿಹೋಕರಲ್ಲಿ ಬಾಲಕ ನೆರವು ಕೇಳಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ಕುಂಠೆಡಗೋಲ ಪೊಲೀಸ್ ಠಾಣಾ ವ್ಯಾಪ್ತಿಯ ಜಿಯಾನಂತಪಾಲಿ ಗ್ರಾಮದ ನಿವಾಸಿ ದುಶ್ಮಂತ್ ಮಾಝಿ ಹಾಗೂ ರಿಂಕಿ ಮಾಝಿ ದಂಪತಿಯು ಮಗನ ಜೊತೆ ಮನೆಗೆ ಶನಿವಾರ ಸಂಜೆ ಬೈಕ್ನಲ್ಲಿ ಹಿಂತಿರುಗುವ ವೇಳೆ ಜಗಳ ಉಂಟಾಗಿತ್ತು. ಮೂವರೂ ಬೈಕ್ ಅನ್ನು ರಸ್ತೆ ಬದಿ ನಿಲ್ಲಿಸಿ, ಒಂದು ಕಿ.ಮೀ ತನಕ ಅರಣ್ಯದೊಳಗೆ ಸಾಗಿ ವಿಷ ಸೇವಿಸಿದ್ದರು.
‘ವಿಷ ಸೇವಿಸಿದ 1 ಗಂಟೆಯಲ್ಲಿ ದುಷ್ಯಂತ್ ಮೃತಪಟ್ಟಿದ್ದರು, ಪತ್ನಿ ರಿಂಕಿ ಪ್ರಜ್ಞೆ ಕಳೆದುಕೊಂಡಿದ್ದರು. ಹೆತ್ತವರು ನೆಲದ ಮೇಲೆ ಬಿದ್ದಿರುವುದನ್ನು ಗಮನಿಸಿ, ಇಡೀ ರಾತ್ರಿ ಚಳಿಯಲ್ಲಿ ಮಗ ಅಲ್ಲಿಯೇ ಕಾದಿದ್ದಾನೆ. ಮರುದಿನ ಸೂರ್ಯಾಸ್ತವಾದ ಬಳಿಕ ದಾರಿಹೋಕರನ್ನು ಕರೆದು, ನೆರವಿಗಾಗಿ ಮನವಿ ಮಾಡಿದ್ದಾನೆ’ ಹೆಚ್ಚುವರಿ ಎಸ್ಪಿ ಧೀರಜ್ ಛೋಪ್ದರ್ ತಿಳಿಸಿದ್ದಾರೆ.
‘ಮಹಿಳೆಯನ್ನು ತಕ್ಷಣವೇ ಸನಿಹದ ಅನುಗುಲ್ ಜಿಲ್ಲೆಯ ಚೆದಿಪಾಡ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ಮೃತಪಟ್ಟರು. ಬಾಲಕನಿಗೂ ಕೀಟನಾಶಕ ನೀಡಿದ್ದರು. ಆದರೂ ಆತ ಬದುಕುಳಿದಿದ್ದಾನೆ’ ಎಂದು ವಿವರಿಸಿದ್ದಾರೆ.
‘ಬಾಲಕನಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಆರೋಗ್ಯವಂತನಾಗಿದ್ದಾನೆ. ಆತನನ್ನು ಅಜ್ಜ–ಅಜ್ಜಿಗೆ ಹಸ್ತಾಂತರಿಸಲಾಗಿದೆ’ ಎಂದು ಧೀರಜ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.