ADVERTISEMENT

ಮುಸ್ಲಿಂ ಪ್ರಧಾನಿಯಾದರೆ ಶೇ 50 ಹಿಂದೂಗಳು ಇಸ್ಲಾಂಗೆ: ಯತಿ ನರಸಿಂಗಾನಂದ

‘ಹಿಂದೂ ಮಹಾಪಂಚಾಯತ್’ ನಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಯತಿ ನರಸಿಂಗಾನಂದ

ಪಿಟಿಐ
Published 3 ಏಪ್ರಿಲ್ 2022, 19:25 IST
Last Updated 3 ಏಪ್ರಿಲ್ 2022, 19:25 IST
ಸಾಂದರ್ಭಿಕ ಚಿತ್ರ (ಕೃಪೆ– ಐಸ್ಟಾಕ್)
ಸಾಂದರ್ಭಿಕ ಚಿತ್ರ (ಕೃಪೆ– ಐಸ್ಟಾಕ್)   

ನವದೆಹಲಿ: ‘ದೇಶದಲ್ಲಿ ಒಂದು ವೇಳೆ ಮುಸ್ಲಿಂ ವ್ಯಕ್ತಿ ಪ್ರಧಾನಿಯಾದರೆ ಮುಂದಿನ 20 ವರ್ಷಗಳಲ್ಲಿ ದೇಶದ ಶೇ 50ರಷ್ಟು ಹಿಂದೂಗಳು ಮುಸ್ಲಿಮರಾಗಿ ಮತಾಂತರಗೊಳ್ಳಲಿದ್ದಾರೆ’ ಎಂದು ದಾಸ್ನಾ ದೇವಿ ದೇವಸ್ಥಾನದ ಪ್ರಧಾನ ಅರ್ಚಕ ಯತಿ ನರಸಿಂಗಾನಂದ ಭಾನುವಾರ ಹೇಳಿಕೆ ನೀಡಿ, ಹೊಸ ವಿವಾದ ಹುಟ್ಟುಹಾಕಿದ್ದಾರೆ.

ದೆಹಲಿ ಆಡಳಿತದ ಅನುಮತಿ ಪಡೆಯದ ‘ಹಿಂದೂ ಮಹಾಪಂಚಾಯತ್’ ಅನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೂಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಡಲು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳಬೇಕೆಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.

ಈ ಹಿಂದೆ ಹರಿದ್ವಾರ ಮತ್ತು ದೆಹಲಿಯ ಜಂತರ್ ಮಂತರ್‌ನಲ್ಲಿ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದ್ದ ಗುಂಪು ಇಲ್ಲಿನ ಬುರಾರಿ ಮೈದಾನದಲ್ಲಿ ಮಹಾಪಂಚಾಯತ್ ಅನ್ನು ಆಯೋಜಿಸಿತ್ತು. ಹಲವು ಮಂದಿ ಹಿಂದೂ ಪ್ರಮುಖ ನಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ನರಸಿಂಹಾನಂದ ಅವರು ಹರಿದ್ವಾರದಲ್ಲಿ ದ್ವೇಷ ಭಾಷಣ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದು, ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ.

‘2029 ಅಥವಾ 2034 ಅಥವಾ 2039ರಲ್ಲಿ ಮುಸ್ಲಿಂ ವ್ಯಕ್ತಿ ಪ್ರಧಾನಿಯಾಗಲಿದ್ದಾರೆ. ಒಮ್ಮೆ ಮುಸ್ಲಿಂ ಪ್ರಧಾನಿಯಾದರೆ, ಶೇ 50 ಹಿಂದೂಗಳು ಇಸ್ಲಾಂಗೆ ಮತಾಂತರವಾಗಲಿದ್ದಾರೆ. ಶೇ 40ರಷ್ಟು ಜನರು ಕೊಲ್ಲಲ್ಪಡಲಿದ್ದಾರೆ.ಉಳಿದ ಶೇ 10ರಷ್ಟು ಜನರು ಮುಂದಿನ 20 ವರ್ಷಗಳಲ್ಲಿ ನಿರಾಶ್ರಿತರ ಶಿಬಿರಗಳಲ್ಲಿ ಅಥವಾ ಪಾಶ್ಚಾತ್ಯ ದೇಶಗಳನ್ನು ಸೇರಿಕೊಳ್ಳಲಿದ್ದಾರೆ’ ಎಂದುನರಸಿಂಗಾನಂದ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.