ಶ್ರೀನಗರ: ಪಾಕಿಸ್ತಾನ ಸೇನೆಯು ಭಾರತೀಯ ಸೇನೆ ಮೇಲೆ ಮತ್ತೊಮ್ಮೆ ಗುಂಡಿನ ದಾಳಿ ನಡೆಸಿದ್ದು, ಸಂಜೆ ಜಮ್ಮುಕಾಶ್ಮೀರದ ಸಾಂಬ ವಲಯದಲ್ಲಿ ಉಭಯ ಪಡೆಗಳ ನಡುವೆ ನಡೆದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಒಬ್ಬ ಬಿಎಸ್ಎಫ್ ಯೋಧ ಹುತಾತ್ಮರಾಗಿದ್ದಾರೆ.
ಹುತಾತ್ಮ ಯೋಧ ಆರ್.ಪಿ ಹಜರಾ ಅವರು ಜನ್ಮದಿನದಂದೇ ಪ್ರಾಣತ್ಯಾಗ ಮಾಡಿದ್ದಾರೆ. ಇವರು ಪಶ್ಚಿಮ ಬಂಗಾಳದ ಮುರ್ಶಿದಾಬಾದ್ನವರು. ಇವರನ್ನು 173ನೇ ಬೆಟಾಲಿಯನ್ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಜರಾ ಅವರನ್ನು ಸಾಂಬಾ ಜಿಲ್ಲೆಯ ಹಿರಾ ನಗರದ ಚಕ್ಮಾ ದುಲ್ಮಾ ವಲಯಕ್ಕೆ ನಿಯೋಜಿಸಲಾಗಿತ್ತು. ಸಂಜೆ ಸುಮಾರು 4.15ರ ವೇಳೆ ನಡೆದ ಗುಂಡಿನ ದಾಳಿ ವೇಳೆ ಹಜರಾ ಅವರಿಗೆ ಗುಂಡು ತಗುಲಿದೆ. ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದ್ದಾರೆ.
ಕಳೆದ ಡಿಸೆಂಬರ್ 31ರಂದು ಪೂಂಚ್ ಜಿಲ್ಲೆಯ ನೌಶೆರಾ ವಲಯದ ಬಳಿ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ಸೇನೆ ಭಾರತೀಯ ಸೇನೆ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ಅಲ್ಲದೇ ಡಿಸೆಂಬರ್ 23ರಂದು ನಡೆದ ದಾಳಿಯಲ್ಲಿ ನಾಲ್ವರು ಭಾರತೀಯ ಯೋಧರು ಹುತಾತ್ಮರಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.