ಭೋಪಾಲ್: ಪತ್ನಿ ಟಿವಿ ರಿಮೋಟ್ ನೀಡಲು ನಿರಾಕರಿಸಿದ ಕಾರಣ ಇಲ್ಲಿನ ಅಶೋಕ ಗಾರ್ಡನ್ ನಿವಾಸಿ ಶಂಕರ್ ವಿಶ್ವಕರ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
‘ಸಣ್ಣ ಹೋಟೆಲ್ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಶಂಕರ್, ಸಾವಿಗೂ ಮುನ್ನ ಯಾವುದೇ ಮರಣ ಪತ್ರ ಬರೆದಿಲ್ಲ’ ಎಂದು ತನಿಖಾಧಿಕಾರಿ ಎಎಸ್ಐ ಅಶೋಕ್ ಸಿಂಗ್ ಹೇಳಿದ್ದಾರೆ.
ಮದ್ಯಪಾನ ವ್ಯಸನಿಯಾಗಿದ್ದ ಶಂಕರ್ ಸಣ್ಣಪುಟ್ಟ ವಿಚಾರಗಳನ್ನೂ ದೊಡ್ಡದಾಗಿ ತೆಗೆದುಕೊಳ್ಳುತ್ತಿದ್ದರು ಎಂದು ಆತನ ಕುಟುಂಬದವರು ತನಿಖೆ ವೇಳೆ ತಿಳಿಸಿದ್ದಾರೆ.
‘ಶನಿವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದಿದ್ದ ಆತ ಕುಟುಂಬದವರೊಡನೆ ಊಟ ಮಾಡಿ ಬಳಿಕ ಟಿವಿ ನೋಡುತ್ತಿದ್ದ. ಈ ವೇಳೆ ಪತ್ನಿಯನ್ನು ಟಿವಿ ರಿಮೋಟ್ ನೀಡುವಂತೆ ಕೇಳಿದ್ದ. ಆದರೆ, ರಿಮೋಟ್ ನೀಡಲು ನಿರಾಕರಿಸಿದ ಪತ್ನಿ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರು. ಬಳಿಕ ಮತ್ತೊಂದು ಕೊಠಡಿಗೆ ತೆರಳಿದ ಶಂಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ತನಿಖೆಯ ನಂತರ ಪೊಲೀಸರು ಮಾಹಿತಿ ನೀಡಿದ್ದಾರೆ.
ಕೆಲ ಸಮಯದ ನಂತರ ಹೆಂಡತಿ ಕೊಠಡಿ ಪ್ರವೇಶಿಸಿದಾಗ ಶಂಕರ್ ಸೀಲಿಂಗ್ ಫ್ಯಾನ್ಗೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಅವರು ಕೂಡಲೇ ವಿಷಯವನ್ನು ಕುಟುಂಬ ಸದಸ್ಯರು ಹಾಗೂ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಅಶೋಕ್ ಸಿಂಗ್ ಹೇಳಿದರು.
ತನಿಖೆ ಪ್ರಗತಿಯಲ್ಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.