ಶ್ರೀನಗರ: ಅಲೀಗಡ ಮುಸ್ಲಿಂ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಮನಾನ್ ಬಶೀರ್ ವಾನಿ ಪಾಕಿಸ್ತಾನದ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆ ಸೇರಿರುವ ಬಗ್ಗೆ ವರದಿಯಾಗಿದೆ.
ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ತಿಕಿಪೊರಾದ ಲೊಲಾಬ್ ಪ್ರದೇಶದ ವಾನಿ ಕಳೆದ ವಾರದಿಂದ ನಾಪತ್ತೆಯಾಗಿದ್ದನು. ಆತ ಉಗ್ರ ಸಂಘಟನೆಗೆ ಸೇರ್ಪಡೆಯಾಗಿರುವ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿತ್ತು. ಆತ ಬಂದೂಕು ಹಿಡಿದುಕೊಂಡಿರುವ ಫೋಟೊ ಸಹ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ವಿಶ್ವವಿದ್ಯಾಲಯವು ಆತನನ್ನು ವಜಾ ಮಾಡಿತ್ತು.
‘ಭೂಗರ್ಭಶಾಸ್ತ್ರ ವಿಷಯದಲ್ಲಿ ಸಂಶೋಧನೆ ನಡೆಸುತ್ತಿದ್ದ ವಾನಿ, ಜನವರಿ 2ರಂದು ಕೊನೆಯ ಬಾರಿ ತರಗತಿಗೆ ಹಾಜರಾಗಿದ್ದ’ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರ ಸಂಘಟನೆ ಸ್ಪಷ್ಟನೆ: ‘ಮನಾನ್ ಬಶೀರ್ ವಾನಿ ನಮ್ಮ ಸಂಘಟನೆಯನ್ನು ಸೇರಿರುವುದು ನಿಜ’ ಎಂದು ಹಿಜ್ಬುಲ್ ಮುಜಾಹಿದೀನ್ನ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಸ್ಪಷ್ಟಪಡಿಸಿದ್ದಾನೆ.
‘ಆರ್ಥಿಕ ಕುಸಿತ ಹಾಗೂ ನಿರುದ್ಯೋಗದಿಂದ ಕಾಶ್ಮೀರದ ಯುವಕರು ಸಂಘಟನೆಗೆ ಸೇರ್ಪಡೆಯಾಗುತ್ತಿದ್ದಾರೆ. ವಾನಿಯ ನಿರ್ಧಾರದಿಂದ ಭಾರತದ ನಿಜ ಬಣ್ಣ ಬಯಲಾಗಿದೆ’ ಎಂದು ಶ್ರೀನಗರದ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸಲಾಹುದ್ದೀನ್ ತಿಳಿಸಿದ್ದಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.