ಭೋಪಾಲ್: ರ್ಯಾಲಿಯೊಂದರಲ್ಲಿ ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡಿದ್ದ ಭೋಪಾಲ್ ಸಂಸದ ಅಲೋಕ್ ಸಂಜಾರ್ ಅವರು ಅದಕ್ಕಾಗಿ ₹250 ದಂಡ ತೆತ್ತಿದ್ದಾರೆ, ಅಲ್ಲದೆ ಕ್ಷಮೆ ಯಾಚಿಸಿದ್ದಾರೆ.
ಓಂಕಾರೇಶ್ವರದಲ್ಲಿ ನಿರ್ಮಿಸಲು ಉದ್ದೇಶಿಸಿರುವ 108 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆಗಾಗಿ ಲೋಹ ಸಂಗ್ರಹಿಸುವ ಉದ್ದೇಶದ ರಾಜ್ಯವ್ಯಾಪಿ ಯಾತ್ರೆಯನ್ನು ಸೋಮವಾರ ಆಯೋಜಿಸಲಾಗಿತ್ತು. ಈ ವೇಳೆ ಸಂಜಾರ್ ಅವರು ಭೋಪಾಲ್ ಕೇಂದ್ರ ಕ್ಷೇತ್ರದ ಶಾಸಕ ಸುರೇಂದ್ರನಾಥ್ ಸಿಂಗ್ ಅವರೊಂದಿಗೆ ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡಿದ್ದರು. ವ್ಯಕ್ತಿಯೊಬ್ಬರು ಈ ಛಾಯಾಚಿತ್ರವನ್ನು ತೆಗೆದು ಸಂಚಾರ ಪೊಲೀಸರ ವಾಟ್ಸ್ಆ್ಯಪ್ಗೆ ಕಳುಹಿಸಿದ್ದರು.
‘ಯಾತ್ರೆಯಲ್ಲಿ ಪಕ್ಷದ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ನಾನು ಹೆಲ್ಮೆಟ್ ಇಲ್ಲದೆ ಬೈಕ್ ಚಲಾವಣೆ ಮಾಡಿದ್ದೆ. ಈ ಕುರಿತು ಯಾರೋ ನನ್ನ ಬಗ್ಗೆ ದೂರು ನೀಡಿರುವುದಾಗಿ ಸಂಚಾರ ಪೊಲೀಸರಿಂದ ಫೋನ್ ಕರೆ ಬಂತು. ಕೂಡಲೇ ಸಂಚಾರ ಪೊಲೀಸ್ ಠಾಣೆಗೆ ತೆರಳಿ ದಂಡ ಕಟ್ಟಿದೆ. ಇನ್ನೆಂದಿಗೂ ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸುವುದಿಲ್ಲ ಮತ್ತು ಸೀಟ್ ಬೆಲ್ಟ್ ಧರಿಸದೆ ಕಾರಿನಲ್ಲಿ ಕೂರುವುದಿಲ್ಲ. ಸಂಚಾರ ನಿಯಮಗಳನ್ನು ಪಾಲಿಸಬೇಕಾದುದು ನನ್ನ ಆದ್ಯ ಕರ್ತವ್ಯ’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.