ಮುಂಬೈ: ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ಕೌಂಟರ್ ಪ್ರಕರಣದ ವಿಚಾರಣೆ ವರದಿ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದ ಸಿಬಿಐ ವಿಶೇಷ ನ್ಯಾಯಾಲಯ ಆದೇಶವನ್ನು ಬಾಂಬೆ ಹೈಕೋರ್ಟ್ ರದ್ದು ಮಾಡಿದೆ.
ನೀತಿ ಕಾಪಾಡುವುದು ಅಷ್ಟೇ ಅಲ್ಲ ಅದನ್ನು ಪಾಲಿಸುವುದು ಕೂಡಾ ನ್ಯಾಯಾಲಯದ ಧರ್ಮ ಎಂದು ಹೈಕೋರ್ಟ್ ಹೇಳಿದೆ.
ವಿಚಾರಣೆಯ ಮಾಹಿತಿಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸುವುದರಿಂದ ಪ್ರಾಸಿಕ್ಯೂಶನ್ ವಕೀಲರು, ಆರೋಪಿಗಳು ಹಾಗೂ ಪ್ರತಿವಾದಿ ತಂಡಗಳ ಭದ್ರತೆಗೆ ಅಪಾಯವುಂಟಾಗುತ್ತದೆ. ಮಾತ್ರಲ್ಲದೆ ಈ ಹಿಂದೆ ತಪ್ಪಾದ ವರದಿಗಳಿಂದಾಗಿ ಎರಡೂ ಕಡೆಗಳಲ್ಲಿ ಪೂರ್ವಾಗ್ರಹ ಸೃಷ್ಟಿಯಾಗುವಂತಾಗಿತ್ತು ಎಂಬ ಕಾರಣ ನೀಡಿ ಮಾಧ್ಯಮಗಳು ವರದಿ ಮಾಡುವುದಕ್ಕೆ ಸಿಬಿಐ ವಿಶೇಷ ನ್ಯಾಯಾಲಯ ನಿರ್ಬಂಧ ಹೇರಿತ್ತು.
ಆದಾಗ್ಯೂ, ಮಾಧ್ಯಮ ವರದಿಗಳು ಸಂಚಲನವನ್ನುಂಟು ಮಾಡುತ್ತವೆ ಎಂಬ ಆತಂಕದಿಂದ ಮಾಧ್ಯಮ ವರದಿಗಳಿಗೆ ನಿರ್ಬಂಧ ಹೇರುವ ಅಧಿಕಾರ ಸಿಬಿಐ ನ್ಯಾಯಾಲಯಕ್ಕೆ ಇಲ್ಲ ಎಂದು ಹೈಕೋರ್ಟ್ ಹೇಳಿದೆ.
ಮಾಧ್ಯಮ ವರದಿಗಳಿಗೆ ನಿರ್ಬಂಧ ಹೇರಿರುವ ಸಿಬಿಐ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪ್ರಮುಖ ಪತ್ರಿಕೆ, ದೃಶ್ಯ ಮಾಧ್ಯಮ ಮತ್ತು ಆನ್ಲೈನ್ ಮಾಧ್ಯಮದ 9 ಪತ್ರಕರ್ತರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿ ಹೈಕೋರ್ಟ್ ಈ ತೀರ್ಪು ಹೊರಡಿಸಿದೆ.
ನ್ಯಾಯಾಲಯದಲ್ಲಿ ನಡೆಯುವ ಸುದ್ದಿಗಳನ್ನು ವರದಿ ಮಾಡಿ ಅದನ್ನು ಜನರಿಗೆ ತಲುಪಿಸುವುದು ಮಾಧ್ಯಮಗಳ ಕರ್ತವ್ಯ ಎಂದು ಪತ್ರಕರ್ತರು ವಾದಿಸಿದ್ದರು.
ಏನಿದು ಪ್ರಕರಣ?
ಸೊಹ್ರಾಬುದ್ದೀನ್ ಭೂಗತ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಜತೆಗೆ ಲಷ್ಕರ್–ಎ–ತಯಬಾ (ಎಲ್ಇಟಿ) ಜತೆ ಸಂಪರ್ಕ ಹೊಂದಿದ್ದ ಎಂದು ಗುಜರಾತ್ ಪೊಲೀಸರು ಆಪಾದಿಸಿದ್ದರು. ಮಹಾರಾಷ್ಟ್ರದ ಸಾಂಗ್ಲಿಯಿಂದ ಹೈದರಾಬಾದ್ಗೆ ತೆರಳುತ್ತಿದ್ದ ಸೊಹ್ರಾಬುದ್ದೀನ್ ಹಾಗೂ ಆತನ ಪತ್ನಿ ಕೌಸರ್ ಬಿಯನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ ಸಿಬ್ಬಂದಿ ಅಪಹರಿಸಿದ್ದರು. 2005ರ ನವೆಂಬರ್ 26ರಂದು ಗಾಂಧಿನಗರದ ಬಳಿ ಆತನನ್ನು ನಕಲಿ ಎನ್ಕೌಂಟರ್ನಲ್ಲಿ ಹತ್ಯೆ ಮಾಡಲಾಯಿತು.
ನಕಲಿ ಎನ್ಕೌಂಟರ್ಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಸೊಹ್ರಾಬುದ್ದೀನ್ ಬಂಟ ತುಳಸಿರಾಮ್ ಪ್ರಜಾಪತಿಯನ್ನು 2006ರ ಡಿಸೆಂಬರ್ನಲ್ಲಿ ಗುಜರಾತ್ನ ಬನಸ್ಕಾಂತ ಜಿಲ್ಲೆಯ ಛಪ್ರಿ ಗ್ರಾಮದಲ್ಲಿ ಪೊಲೀಸರು ನಕಲಿ ಎನ್ಕೌಂಟರ್ ನಡೆಸಿ ಹತ್ಯೆ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.