ಝಬುಆ (ಮಧ್ಯಪ್ರದೇಶ): ಥಾಂಡ್ಲಾದ ನವೋದಯ ವಿದ್ಯಾಲಯದಲ್ಲಿ ಶಿಕ್ಷಕರ ಸೂಚನೆ ಮೇರೆಗೆ ಆರನೇ ತರಗತಿ ವಿದ್ಯಾರ್ಥಿನಿಗೆ ಸಹಪಾಠಿಗಳು 168 ಬಾರಿ ಕೆನ್ನೆಗೆ ಹೊಡೆದಿದ್ದಾರೆ.
ಈ ಕುರಿತು ವಿದ್ಯಾರ್ಥಿನಿ ತಂದೆ ಶಿವಪ್ರತಾಪ್ ಸಿಂಗ್ ಶಾಲೆಯ ಅಧಿಕಾರಿಗಳು ಹಾಗೂ ಪೊಲೀಸರಿಗೆ ದೂರು ನೀಡಿದ್ದಾರೆ.
‘ಶಾಲೆಯ ವಿಜ್ಞಾನ ಶಿಕ್ಷಕ ಮನೋಜ್ ಕುಮಾರ್ ವರ್ಮ ಅವರ ಸೂಚನೆಯಂತೆ, ಜನವರಿ 11ರಿಂದ 16ವರೆಗೆ ಪ್ರತಿದಿನ 14 ಸಹಪಾಠಿಗಳು ನನ್ನ ಮಗಳಿಗೆ ಎರಡು ಬಾರಿ ಏಟು ನೀಡಿದ್ದಾರೆ. ನನ್ನ ಮಗಳು ಹೋಂವರ್ಕ್ ಮಾಡದೆ ಹೋಗಿದ್ದಕ್ಕೆ ಈ ಶಿಕ್ಷೆ ನೀಡಿದ್ದಾರೆ. ಆದರೆ ಆಕೆಗೆ ಅನಾರೋಗ್ಯವಾಗಿದ್ದರಿಂದ ಹೋಂವರ್ಕ್ ಮಾಡಲು ಸಾಧ್ಯವಾಗಿರಲಿಲ್ಲ. ಆಕೆಯ ಅನಾರೋಗ್ಯ ಕುರಿತು ಶಾಲೆಯವರಿಗೂ ತಿಳಿದಿತ್ತು’ ಎಂದು ದೂರಿನಲ್ಲಿ ಸಿಂಗ್ ಉಲ್ಲೇಖಿಸಿದ್ದಾರೆ.
ಶಿಕ್ಷಕರ ಕ್ರಮ ಸಮರ್ಥಿಸಿಕೊಂಡಿರುವ ಶಾಲೆಯ ಪ್ರಾಂಶುಪಾಲ ಕೆ. ಸಾಗರ್ ‘ಅವು ಜೋರಾದ ಏಟುಗಳಲ್ಲ. ಸ್ನೇಹಯುತವಾಗಿ ಹೀಗೆ ಮಾಡಲಾಗಿತ್ತು. ವಿದ್ಯಾರ್ಥಿನಿ ಪೋಷಕರ ಜತೆ ಮಾತನಾಡುತ್ತೇವೆ’ ಎಂದು ತಿಳಿಸಿದ್ದಾರೆ.
ದೂರು ಸ್ವೀಕರಿಸಲಾಗಿದೆ ಎಂದು ಥಾಂಡ್ಲಾ ಪೊಲೀಸ್ ಠಾಣೆಯ ಉಸ್ತುವಾರಿ ಎಸ್.ಎಸ್.ಬಘೆಲ್ ದೃಢಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.