ನವದೆಹಲಿ (ಪಿಟಿಐ): ಹಿರಿಯ ನಾಗರಿಕರಿಗೆ ಸರಣಿಯೋಪಾದಿಯಲ್ಲಿ ಹಲವಾರು ಪ್ರಯೋಜನಗಳನ್ನು ಕಲ್ಪಿಸಲಾಗಿದೆ.
ಠೇವಣಿಗಳ ಮೇಲಿನ ಬಡ್ಡಿಯಿಂದ ಬರುವ ವರಮಾನದ ವಿನಾಯ್ತಿ ಮಿತಿಯನ್ನು ಐದು ಪಟ್ಟುಗಳಷ್ಟು ಅಂದರೆ ಪ್ರತಿ ವರ್ಷಕ್ಕೆ₹ 10 ಸಾವಿರದಿಂದ ₹50 ಸಾವಿರಕ್ಕೆ ಏರಿಸಲಾಗಿದೆ.
ಇದರ ಜತೆಗೆ, ಆದಾಯ ತೆರಿಗೆ ಕಾಯ್ದೆಯ ‘ಸೆಕ್ಷನ್ 80ಡಿ’ ಅಡಿ ಆರೋಗ್ಯ ವಿಮೆ ಕಂತು ಮತ್ತು ವೈದ್ಯಕೀಯ ವೆಚ್ಚದ ವಿನಾಯ್ತಿ ಮಿತಿಯನ್ನು ಸದ್ಯದ ₹ 30 ಸಾವಿರದಿಂದ ₹50 ಸಾವಿರಕ್ಕೆ ಹೆಚ್ಚಿಸಲಾಗಿದೆ.
ಎಲ್ಲ ಹಿರಿಯ ನಾಗರಿಕರು ಯಾವುದೇ ಆರೋಗ್ಯ ವಿಮೆ ಕಂತು ಮತ್ತು ಸಾಮಾನ್ಯ ವೈದ್ಯಕೀಯ ವೆಚ್ಚದ ರೂಪದಲ್ಲಿ ₹ 50 ಸಾವಿರದವರೆಗೆ ತೆರಿಗೆ ವಿನಾಯ್ತಿ ಪ್ರಯೋಜನ ಪಡೆದುಕೊಳ್ಳಬಹುದು. ಗಂಭೀರ ಸ್ವರೂಪದ ಕಾಯಿಲೆಗೆ ಮಾಡುವ ವೆಚ್ಚದ ವಿನಾಯ್ತಿ ಮಿತಿಯನ್ನು ‘ಸೆಕ್ಷನ್ 80ಡಿಡಿಬಿ’ ಅಡಿ ₹1 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ವಿಸ್ತರಣೆ: ಪ್ರಧಾನ ಮಂತ್ರಿ ವಯಾ ವಂದನಾ ಪಿಂಚಣಿ ಯೋಜನೆಯನ್ನು 2020ರ ಮಾರ್ಚ್ವರೆಗೆ ವಿಸ್ತರಿಸಲಾಗಿದೆ. ಈ ಯೋಜನೆಯಡಿ ಭಾರತೀಯ ಜೀವವಿಮಾ ನಿಗಮವು (ಎಲ್ಐಸಿ) ಶೇ 8ರಷ್ಟು ವರಮಾನದ ಭರವಸೆ ನೀಡಲಿದೆ. 60 ವರ್ಷಕ್ಕಿಂತ ಹೆಚ್ಚಿನವರು ಈ ಯೋಜನೆಯಲ್ಲಿ ತೊಡಗಿಸಲು ಇದ್ದ ₹ 7.5 ಲಕ್ಷ ಹೂಡಿಕೆ ಮಿತಿಯನ್ನು ಕೂಡ ದುಪ್ಪಟ್ಟುಗೊಳಿಸಿ ₹15 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಈ ಎಲ್ಲ ಯೋಜನೆಗಳಿಂದ ಹಿರಿಯ ನಾಗರಿಕರಿಗೆ ಒಟ್ಟಾರೆ ವರ್ಷಕ್ಕೆ ₹4 ಸಾವಿರ ಕೋಟಿಗಳಷ್ಟು ಪ್ರಯೋಜನ ಲಭಿಸಲಿದೆ ಎಂದು ಜೇಟ್ಲಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.