ನವದೆಹಲಿ : ರಾಜಕೀಯವಾಗಿ ಸಂಚಲನ ಮೂಡಿಸಿದ್ದ ಬೊಫೋರ್ಸ್ ಹಗರಣದ ಎಲ್ಲ ಆರೋಪಿಗಳ ವಿರುದ್ಧದ ಆರೋಪಗಳನ್ನು ಖುಲಾಸೆಗೊಳಿಸಿ 2005ರಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂಕೋರ್ಟ್ಗೆ ಶುಕ್ರವಾರ ಅರ್ಜಿ ಸಲ್ಲಿಸಿದೆ.
ಮೇಲ್ಮನವಿ ಸಲ್ಲಿಸಲು ಕಾನೂನು ಅಧಿಕಾರಿಗಳು ಸಮ್ಮತಿ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೆಲವು ಮುಖ್ಯ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಇಟ್ಟುಕೊಂಡು ಸಿಬಿಐ ಮೇಲ್ಮನವಿ ಸಲ್ಲಿಸಿದೆ. ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ಈ ಬಗ್ಗೆ ಸಿಬಿಐಗೆ ಸಲಹೆ ನೀಡಿದ್ದರು.
ಯುರೋಪ್ ಮೂಲದ ಉದ್ಯಮಿಗಳಾದ ಹಿಂದೂಜಾ ಸೋದರರು ಸೇರಿ ಎಲ್ಲ ಆರೋಪಿಗಳನ್ನು ದೋಷ ಮುಕ್ತಗೊಳಿಸಲಾಗಿತ್ತು. ಆದರೆ ಸಿಬಿಐ ಮೇಲ್ಮನವಿ ಸಲ್ಲಿಸಲು ವಿಫಲವಾಗಿತ್ತು. ಆದರೆ ಬಿಜೆಪಿ ಮುಖಂಡ ಅಜಯ್ ಅಗರ್ವಾಲ್ ಅವರು ದಶಕದಿಂದ ಸುಪ್ರೀಂಕೋರ್ಟ್ನಲ್ಲಿ ಈ ಪ್ರಕರಣ ಇಟ್ಟುಕೊಂಡು ಕಾನೂನು ಸಮರ ನಡೆಸುತ್ತಿದ್ದಾರೆ.
ಏನಿದು ಪ್ರಕರಣ: 1986ರಲ್ಲಿ ಭಾರತ ಹಾಗೂ ಸ್ವೀಡನ್ನ ಶಸ್ತ್ರಾಸ್ತ್ರ ತಯಾರಿಕಾ ಸಂಸ್ಥೆ ಎ.ಬಿ ಬೊಫೋರ್ಸ್ ಮಧ್ಯೆ ₹1437 ಕೋಟಿ ಮೊತ್ತದ 400 ಹೋವರಿಟ್ಜ್ ಗನ್ ಪೂರೈಸುವ ಒಪ್ಪಂದ ಆಗಿತ್ತು. ಭಾರತದ ರಾಜಕಾರಣಿಗಳು, ರಕ್ಷಣಾ ಅಧಿಕಾರಿಗಳಿಗೆ ಬೊಫೋರ್ಸ್ ಕಂಪೆನಿಯು ಲಂಚ ನೀಡಿದೆ ಎಂದು ಸ್ವೀಡಿಶ್ ರೇಡಿಯೋ ಹೇಳಿತ್ತು. ಸಿಬಿಐ 1990ರಲ್ಲಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. ಚಡ್ಡಾ, ಒಟ್ಟಾವಿಯೊ ಕ್ವಟ್ರೊಚಿ, ಭಟ್ನಾಗರ್, ಹಿಂದೂಜಾ ಸಹೋದರರು, ಕಂಪೆನಿ ಅಧಿಕಾರಿಗಳನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.