ಲಖನೌ: ‘ಪ್ರತಿಯೊಬ್ಬರಿಗೂ ಭದ್ರತೆಯ ಖಚಿತತೆ ನೀಡಬೇಕಾಗುತ್ತದೆ. ಯಾರು ಶಾಂತಿಗೆ ಧಕ್ಕೆ ತರಲು ಪ್ರಯತ್ನಿಸುತ್ತಾರೋ ಮತ್ತು ಬಂದೂಕಿನ ಮೇಲೆ ನಂಬಿಕೆ ಇಟ್ಟಿರುತ್ತಾರೋ ಅಂಥವರಿಗೆ ಬಂದೂಕಿನ ಭಾಷೆಯಲ್ಲೇ ಉತ್ತರ ನೀಡಲಾಗುವುದು’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.
ಗೋರಖಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇತ್ತೀಚೆಗೆ ನಡೆದ ಎನ್ಕೌಂಟರ್ಗಳ ಬಗ್ಗೆ ಪ್ರಸ್ತಾಪಿಸಿದರು. ಇತ್ತೀಚೆಗೆ ರಾಜ್ಯದಲ್ಲಿ ನಡೆದ ಎನ್ಕೌಂಟರ್ಗಳ ಬಗ್ಗೆ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬುಧವಾರ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ವ್ಯಕ್ತವಾಗಿತ್ತು.
ಪೊಲೀಸ್ ಮಹಾ ನಿರ್ದೇಶಕರ ಕಚೇರಿಯ ಮಾಹಿತಿ ಪ್ರಕಾರ, 2017ರ ಮಾರ್ಚ್ 20 ಮತ್ತು 2018ರ ಜನವರಿ 31ರ ನಡುವೆ ಉತ್ತರ ಪ್ರದೇಶದಲ್ಲಿ 1,142 ಎನ್ಕೌಂಟರ್ಗಳು ನಡೆದಿವೆ. ಅಪರಾಧ ಪ್ರಕರಣಗಳ ಆರೋಪ ಎದುರಿಸುತ್ತಿರುವ 38 ಮಂದಿಯನ್ನು ಹತ್ಯೆ ಮಾಡಲಾಗಿದೆ. ಕಳೆದ 25 ದಿನಗಳಲ್ಲೇ 60 ಎನ್ಕೌಂಟರ್ಗಳು ನಡೆದಿದ್ದು ಎಂಟು ಮಂದಿಯನ್ನು ಹತ್ಯೆ ಮಾಡಲಾಗಿದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, 10 ತಿಂಗಳ ಅವಧಿಯಲ್ಲಿ ಒಟ್ಟಾರೆ 921 ಎನ್ಕೌಂಟರ್ಗಳು ನಡೆದಿವೆ ಎಂದು ಜನವರಿ 11ರಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿತ್ತು. ಈ ಪೈಕಿ 29 ಎನ್ಕೌಂಟರ್ಗಳಲ್ಲಿ 30 ಮಂದಿ ಹತರಾಗಿದ್ದಾರೆ. ಮೂವರು ಪೊಲೀಸ್ ಸಿಬ್ಬಂದಿಯೂ ಸಾವಿಗೀಡಾಗಿದ್ದಾರೆ ಎಂದು ವರದಿ ಉಲ್ಲೇಖಿಸಿತ್ತು.
ಇದನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.