ಮುಂಬೈ: ಫೆಬ್ರುವರಿ 7ರಂದು ಇಲ್ಲಿನ ಆಗಸದಲ್ಲಿ ಎರಡು ವಿಮಾನಗಳು ಒಂದಕ್ಕೊಂದು ಕಡಿಮೆ ಅಂತರದಲ್ಲಿ ಸಮೀಪಿಸಿದ್ದು, ಸ್ವಲ್ಪದರಲ್ಲೇ ಅಪಘಾತ ಆಗುವುದು ತಪ್ಪಿದೆ. ಈ ಬಗ್ಗೆ ವಿಮಾನ ಅಪಘಾತ ತನಿಖಾ ದಳ ತನಿಖೆ ಆರಂಭಿಸಿದೆ.
‘ವಿಸ್ತಾರ’ ವಿಮಾನಯಾನ ಸಂಸ್ಥೆಯ, 152 ಪ್ರಯಾಣಿಕರಿದ್ದ ಯುಕೆ 997 ವಿಮಾನವು ಮುಂಬೈನಿಂದ ಭೋಪಾಲ್ಗೆ ತೆರಳುತ್ತಿತ್ತು. ಏರ್ ಇಂಡಿಯಾ ಸಂಸ್ಥೆಯ, 109 ಪ್ರಯಾಣಿಕರಿದ್ದ ಎಐ 631 ವಿಮಾನವು ದೆಹಲಿಯಿಂದ ಪುಣೆಗೆ ತೆರಳುತ್ತಿತ್ತು. ವಿಸ್ತಾರ ಸಂಸ್ಥೆಯ ವಿಮಾನವು100 ಅಡಿ ಅಂತರ ಮಾತ್ರ ಇರುವಂತೆ ಏರ್ ಇಂಡಿಯಾದ ವಿಮಾನವನ್ನು ಮುಖಾಮುಖಿಯಾಗಿದೆ. ಈ ಅಂತರ ಇನ್ನೂ ಕಡಿಮೆ ಆಗಿದ್ದರೆ ಭಾರಿ ಅಪಘಾತ ಆಗುವ ಸಾಧ್ಯತೆ ಇತ್ತು. ಎರಡೂ ವಿಮಾನಗಳು ಪರಸ್ಪರ ಸಮೀಪಿಸುತ್ತಿವೆ ಎಂಬ ಸ್ವಯಂಚಾಲಿತ ಎಚ್ಚರಿಕೆ ಸಂದೇಶದ ನಂತರ ಆಯಾ ವಿಮಾನಗಳ ಪೈಲಟ್ಗಳು ಅಪಘಾತ ತಪ್ಪಿಸಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಸುರಕ್ಷತಾ ಅಂತರ ಕಾಯ್ದುಕೊಳ್ಳುವ ಮುನ್ನ ವಿಸ್ತಾರ ವಿಮಾನವು ಕೇವಲ 100 ಅಡಿ ಅಂತರದಲ್ಲಿತ್ತು’ ಎಂದು ಏರ್ ಇಂಡಿಯಾ ವಿಮಾನದ ಕ್ಯಾಪ್ಟನ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
‘ವಿಚಾರಣೆ ಬಾಕಿ ಇರುವುದರಿಂದ ವಿಸ್ತಾರ ಸಂಸ್ಥೆಯ ವಿಮಾನದ ಹಾರಾಟಕ್ಕೆ ಅನುಮತಿ ನೀಡಿಲ್ಲ. ಏರ್ ಇಂಡಿಯಾ ಸಂಸ್ಥೆಯ ವಿಮಾನವನ್ನು ಹಾರಾಟಕ್ಕೆ ಮುಕ್ತಗೊಳಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.