ಗುವಾಹಟಿ: ಅಸ್ಸಾಂನಲ್ಲಿ ಎಂಟು ಬಂಡಾಯ ಗುಂಪುಗಳ 644 ಉಗ್ರಗಾಮಿಗಳು ಗುರುವಾರ ಶರಣಾಗತರಾಗಿದ್ದಾರೆ.
ಉಲ್ಫಾ, ಎನ್ಡಿಎಫ್ಬಿ, ಆರ್ಎನ್ಎಲ್ಎಫ್, ಕೆಎಲ್ಒ, ಸಿಪಿಐ(ಮಾವೋಯಿಸ್ಟ್), ಎನ್ಎಸ್ಎಲ್ಎ, ಎಡಿಎಫ್ ಹಾಗೂ ಎನ್ಎಲ್ಎಫ್ಬಿ ಗುಂಪಿನ ಸದಸ್ಯರು, ಮುಖ್ಯಮಂತ್ರಿ ಸರ್ವಾನಂದ ಸೊನೊವಾಲ್ ಮುಂದೆ ಸಮಾಜದ ಮುಖ್ಯವಾಹಿನಿಗೆ ಸೇರಿದರು. ‘ನೀವು ಮುಖ್ಯವಾಹಿನಿಗೆ ಮತ್ತೆ ಬಂದಿರುವುದಕ್ಕೆ ಜನರು ಸಂತೋಷಗೊಂಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಿಸಿದವರಿಗೆ ನೀವು ಪ್ರೇರಣೆಯಾಗಿದ್ದೀರಿ. ಶಾಂತಿ ಇಲ್ಲದೆ ಅಭಿವೃದ್ಧಿ ಸಾಧ್ಯವಿಲ್ಲ. ಉಳಿದ ಸದಸ್ಯರೂ ಮುಖ್ಯವಾಹಿನಿಗೆ ಬರಲಿ’ ಎಂದು ಸೊನೊವಾಲ್ ಹೇಳಿದರು.
‘ಶರಣಾದವರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಸರ್ಕಾರದ ಯೋಜನೆಗಳ ಲಾಭವನ್ನೂ ಇವರು ಪಡೆದುಕೊಳ್ಳಲಿದ್ದಾರೆ’ ಎಂದರು.
ಶಸ್ತ್ರಾಸ್ತ್ರ ವಶಕ್ಕೆ: ಶರಣಾದ ಉಗ್ರಗಾಮಿಗಳು 177 ಬಂದೂಕು, 58 ಮ್ಯಾಗಜೀನ್, 1.93 ಕೆ.ಜಿ. ಸ್ಫೋಟಕ, 52 ಗ್ರೆನೇಡ್, 71 ಬಾಂಬ್, ಮೂರು ರಾಕೆಟ್ ಲಾಂಚರ್, 306 ಡೆಟೊನೇಟರ್ಗಳು ಹಾಗೂ 17 ಚಾಕೂಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.