ADVERTISEMENT

ಪ್ರತಿಭಟನಾನಿರತ ರೈತರ ಜತೆ ಮೋದಿ ಮಾತನಾಡಿದ್ದರೆ 733 ಜೀವ ಉಳಿಸಬಹುದಿತ್ತು: ರಾಹುಲ್

ಪಿಟಿಐ
Published 20 ನವೆಂಬರ್ 2022, 10:58 IST
Last Updated 20 ನವೆಂಬರ್ 2022, 10:58 IST
 ರಾಹುಲ್‌ ಗಾಂಧಿ  
 ರಾಹುಲ್‌ ಗಾಂಧಿ     

ಬುಲ್ಧಾನಾ, ಮಹಾರಾಷ್ಟ್ರ: ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದರೆ 733 ಜೀವಗಳನ್ನು ಉಳಿಸಬಹುದಿತ್ತು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿಷಾದ ವ್ಯಕ್ತಪಡಿಸಿದರು.

ಭಾರತ್‌ ಜೋಡೊ ಯಾತ್ರೆಯ ಭಾಗವಾಗಿ ಬುಲ್ಧಾನಾ ಜಿಲ್ಲೆಯ ಭಸ್ತಾನ್ ಗ್ರಾಮದಲ್ಲಿ ರಾಹುಲ್‌ ಗಾಂಧಿ ಮಾತನಾಡಿದರು. ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಸುದೀರ್ಘ ಕಾಲ ನಡೆಸಿದ ಚಳವಳಿ ವೇಳೆ ಮೃತಪಟ್ಟ ರೈತರಿಗೆ ಸಂತಾಪ ವ್ಯಕ್ತಪಡಿಸಿದರು.

ನ.19 ಅನ್ನು ಕಾಂಗ್ರೆಸ್ ಕಿಸಾನ್‌ ವಿಜಯ್‌ ದಿವಸ್‌ (ರೈತರ ವಿಜಯದ ದಿನ)ವನ್ನಾಗಿ ಆಚರಿಸಿತು.

ADVERTISEMENT

ರೈತರು ಈ ರಾಷ್ಟ್ರದ ಧ್ವನಿಯಾಗಿದ್ದಾರೆ. ಕೃಷಿ ಕಾಯ್ದೆಗಳು ರೈತರ ವಿರೋಧಿಯಾಗಿದ್ದವು. ಹಾಗಾಗಿ ಅವರು ದೆಹಲಿಯ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದರು. ಆದರೆ, ಪ್ರಧಾನಿ ಅವರು ರೈತರ ಬೇಡಿಕೆಗಳನ್ನು ನಿರ್ಲಕ್ಷಿಸಿದರು. ಕೃಷಿ ಕಾಯ್ದೆಗಳು ಕೆಲವು ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುವಂತವುಗಳಾಗಿದ್ದವು ಎಂದು ರಾಹುಲ್‌ ಹೇಳಿದರು.

ಕೇಂದ್ರ ಸರ್ಕಾರಕ್ಕೆ ಪೊಲೀಸರಿದ್ದಾರೆ, ಶಸ್ತ್ರಾಸ್ತ್ರಗಳಿವೆ, ಆಡಳಿತದ ಅಧಿಕಾರವಿದೆ. ಆದರೆ, ರೈತರಿಗೆ ಕೇವಲ ಅವರ ಧ್ವನಿಯಿದೆ. ಈ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಚಳವಳಿ ಸಂದರ್ಭ 733 ರೈತರು ಪ್ರಾಣ ಕಳೆದುಕೊಂಡರು ಎಂದು ಬೇಸರಿಸಿದರು.

ರಾಹುಲ್‌ ಗಾಂಧಿ ಭಾಷಣ ಕೊನೆಗೊಳಿಸುತ್ತಿದ್ದಂತೆ ಸಭೆಯಲ್ಲಿದ್ದ ಎಲ್ಲರೂ ಎದ್ದು ನಿಂತು ಮೃತ ರೈತರಿಗೆ ಸಂತಾಪ ಸೂಚಿದರು. ಈ ವೇಳೆ ಸಭೆ ಸಮೀಪದಲ್ಲೇ ಕೆಲವು ಅಪರಿಚಿತರು ಪಟಾಕಿಗಳನ್ನು ಸಿಡಿಸಿದರು. ಇದರಿಂದ ಕೋಪಗೊಂಡ ರಾಹುಲ್‌ , ಪಟಾಕಿ ಹೊಡೆದವರು ಈ ರಾಷ್ಟ್ರದ ಇಡೀ ರೈತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.