ನವದೆಹಲಿ: ಸುಪ್ರೀಂ ಕೋರ್ಟ್ನ ನಿರ್ದೇಶನಗಳನ್ನು ಅನುಸರಿಸಿ ಮತದಾರರ ಗುರುತನ್ನು ಸ್ಥಾಪಿಸಲು ಆಧಾರ್ ಕಾರ್ಡ್ ಅನ್ನು ಹೆಚ್ಚುವರಿ ದಾಖಲೆಯಾಗಿ ಸ್ವೀಕರಿಸಲು ಭಾರತೀಯ ಚುನಾವಣಾ ಆಯೋಗವು ಬಿಹಾರ ಚುನಾವಣಾ ಆಯೋಗಕ್ಕೆ ಸೂಚಿಸಿದೆ..
ಮಂಗಳವಾರ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ಬರೆದ ಪತ್ರದಲ್ಲಿ ಆಯೋಗವು, ಪಟ್ಟಿ ಮಾಡಲಾದ 11 ದಾಖಲೆಗಳ ಜೊತೆಗೆ ಆಧಾರ್ ಕಾರ್ಡ್ ಅನ್ನು 12ನೇ ದಾಖಲೆಯಾಗಿ ಪರಿಗಣಿಸಲಾಗುತ್ತದೆ ಎಂದು ಹೇಳಿದೆ.
ಆಧಾರ್ (ಹಣಕಾಸು ಮತ್ತು ಇತರ ಸಬ್ಸಿಡಿಗಳು, ಪ್ರಯೋಜನಗಳು ಹಾಗೂ ಸೇವೆಗಳ ವಿತರಣೆ) ಕಾಯ್ದೆಯ ಸೆಕ್ಷನ್ 9ರ ಪ್ರಕಾರ, ಆಧಾರ್ ಕಾರ್ಡ್ ಅನ್ನು ಗುರುತಿನ ಪುರಾವೆಯಾಗಿ ಬಳಸಬೇಕೇ ಹೊರತು ಪೌರತ್ವದ ಪುರಾವೆಯಾಗಿ ಅಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಜನತಾ ಪ್ರಾತಿನಿಧ್ಯ ಕಾಯ್ದೆ 1950ರ ಸೆಕ್ಷನ್ 23(4) ರ ಅಡಿಯಲ್ಲಿ ಆಧಾರ್ ಕಾರ್ಡ್ ಈಗಾಗಲೇ ವ್ಯಕ್ತಿಯ ಗುರುತನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಬಳಸುವ ದಾಖಲೆಗಳಲ್ಲಿ ಒಂದಾಗಿದೆ.
ಈ ನಿರ್ದೇಶನದ ಅನುಸಾರ ಆಧಾರ್ ಅನ್ನು ಅನುಸರಿಸದಿರುವ ಅಥವಾ ಸ್ವೀಕರಿಸಲು ನಿರಾಕರಿಸುವ ಯಾವುದೇ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಚುನಾವಣಾ ಆಯೋಗ ಎಚ್ಚರಿಸಿದೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಮತದಾರರ ಗುರುತಿನ ಪುರಾವೆಯಾಗಿ ಆಧಾರ್ ಕಾರ್ಡ್ ಅನ್ನು ಸೇರಿಸಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶಿಸಿತ್ತು. ಅಲ್ಲದೆ, ಸೆಪ್ಟೆಂಬರ್ 9ರೊಳಗೆ ನಿರ್ದೇಶನವನ್ನು ಜಾರಿಗೆ ತರುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು.
.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.