ADVERTISEMENT

ಎಎಪಿಯಿಂದ ಮಾತ್ರ ಸ್ಥಿರ ಸರ್ಕಾರ: ಕೇಜ್ರಿವಾಲ್‌

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2021, 17:19 IST
Last Updated 29 ಸೆಪ್ಟೆಂಬರ್ 2021, 17:19 IST
ಅರವಿಂದ ಕೇಜ್ರಿವಾಲ್‌
ಅರವಿಂದ ಕೇಜ್ರಿವಾಲ್‌   

ದೆಹಲಿ: ಪಂಜಾಬ್‌ನಲ್ಲಿ ತಮ್ಮ ಪಕ್ಷ ಮಾತ್ರ ಸುಸ್ಥಿರ ಮತ್ತು ಪ್ರಾಮಾಣಿಕ ಸರ್ಕಾರ ರಚಿಸಬಲ್ಲುದು ಎಂದು ಎಎಪಿ ಮುಖಸ್ಥ ಅರವಿಂದ ಕೇಜ್ರಿವಾಲ್‌ ಅವರು ಬುಧವಾರ ಹೇಳಿದ್ದಾರೆ.

ಪಂಜಾಬ್‌ ರಾಜಕಾರಣವು ತಮಾಶೆಯ ಮಟ್ಟಕ್ಕೆ ಬಂದಿದೆ. ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್ ಚನ್ನಿ ಅವರು ‘ಕಳಂಕಿತ’ ಸಚಿವರನ್ನು ಕೈಬಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಪಂಜಾಬ್‌ ಕಾಂಗ್ರೆಸ್‌ ಘಟಕವು ಬಿಕ್ಕಟ್ಟಿಗೆ ಸಿಲುಕಿದ ಮರುದಿನವೇ ಅವರು ಆ ರಾಜ್ಯಕ್ಕೆ ಭೇಟಿ ಕೊಟ್ಟಿದ್ದಾರೆ.

‘ರಾಜ್ಯದಲ್ಲಿ ಯಾವ ರೀತಿಯ ರಾಜಕೀಯ ಪರಿಸ್ಥಿತಿ ಇದೆ ಎಂಬುದನ್ನು ನೋಡಲು ಇಲ್ಲಿಗೆ ಬಂದಿದ್ದೇನೆ. ರಾಜಕೀಯ ಅಸ್ಥಿರತೆ ಇದೆ. ಅದು ದುರದೃಷ್ಟಕರ’ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ADVERTISEMENT

ಹಿಂದಿನ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ನೀಡಿದ್ದ ಭರವಸೆಗಳನ್ನು ಈಗಿನ ಸರ್ಕಾರ ಈಡೇರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

‘ಯುವ ಜನರಿಗೆ ದೊರೆಯುವವರೆಗೆ ನಿರುದ್ಯೋಗ ಭತ್ಯೆ ನೀಡುವುದಾಗಿ ಅಮರಿಂದರ್‌ ಹೇಳಿದ್ದರು. ಈ ಭತ್ಯೆಯನ್ನು ನೀಡಬೇಕು. ರೈತರ ಸಾಲ ಮನ್ನಾದ ಭರವಸೆಯನ್ನೂ ಅವರು ಕೊಟ್ಟಿದ್ದರು’ ಎಂದು ಕೇಜ್ರಿವಾಲ್‌ ನೆನಪಿಸಿದ್ದಾರೆ.

‘ನಾನು ಮೊದಲ ಬಾರಿ
ಮುಖ್ಯಮಂತ್ರಿಯಾಗಿದ್ದಾಗ 49 ದಿನ ಮಾತ್ರ ಅಧಿಕಾರದಲ್ಲಿದ್ದೆ. ಅಷ್ಟೇ ಅವಧಿಯಲ್ಲಿ ವಿದ್ಯುತ್‌ ಶುಲ್ಕವನ್ನು ಅರ್ಧಕ್ಕೆ ಇಳಿಸಿದ್ದೆ, ಉಚಿತ ನೀರು ಒದಗಿಸಿದ್ದೆ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದೆ. 49 ದಿನಗಳಲ್ಲಿ ನಾನು ಅಷ್ಟು ಮಾಡಬಹುದು ಎಂದಾದರೆ, ಚನ್ನಿ ಅವರು
ಬಾಕಿ ಉಳಿದಿರುವ ಕೆಲಸಗಳನ್ನು ಪೂರೈಸಬಹುದು’ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.