ADVERTISEMENT

ದೆಹಲಿ| ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ನಡುವೆಯೇ ಬಿಜೆಪಿ ಸೇರಿದ ಎಎಪಿ ಕೌನ್ಸಿಲರ್

ಪಿಟಿಐ
Published 24 ಫೆಬ್ರುವರಿ 2023, 5:33 IST
Last Updated 24 ಫೆಬ್ರುವರಿ 2023, 5:33 IST
ಬಿಜೆಪಿ ಸೇರಿದ ದೆಹಲಿ ಆಮ್‌ ಆದ್ಮಿ ಪಕ್ಷದ ಕಾರ್ಪೊರೇಟರ್‌ ಪವನ್ ಸೆಹ್ರಾವತ್
ಬಿಜೆಪಿ ಸೇರಿದ ದೆಹಲಿ ಆಮ್‌ ಆದ್ಮಿ ಪಕ್ಷದ ಕಾರ್ಪೊರೇಟರ್‌ ಪವನ್ ಸೆಹ್ರಾವತ್   

ನವದೆಹಲಿ: ದೆಹಲಿ ಆಮ್‌ ಆದ್ಮಿ ಪಕ್ಷದ ಕಾರ್ಪೊರೇಟರ್‌ ಪವನ್ ಸೆಹ್ರಾವತ್ ಅವರು ಶುಕ್ರವಾರ ಬಿಜೆಪಿ ಸೇರಿದ್ದಾರೆ.

ದೆಹಲಿ ಮುನ್ಸಿಪಲ್‌ ಕಾರ್ಪೊರೇಷನ್‌ (ಎಂಸಿಡಿ)ನ ಸ್ಥಾಯಿ ಸಮಿತಿಯ ಆರು ಸದಸ್ಯ ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಈ ಮಧ್ಯೆ ಪವನ್‌ ಸೆಹ್ರಾವತ್‌ ಪಕ್ಷ ತೊರೆದಿರುವುದು ಎಎಪಿಗೆ ಮುಜುಗರ ಸೃಷ್ಟಿ ಮಾಡಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿಯಲ್ಲಿ ಭ್ರಷ್ಟಾಚಾರದಿಂದಾಗಿ ಉಸಿರುಗಟ್ಟುವಿಕೆಯ ವಾತಾವರಣ ಸೃಷ್ಟಿಯಾಗಿದೆ ಎಂದು ಪವನ್‌ ಆರೋಪಿಸಿದ್ದಾರೆ.

ADVERTISEMENT

‘ಎಂಸಿಡಿಯಲ್ಲಿ ಗದ್ದಲ ಸೃಷ್ಟಿಸಲು ಎಎಪಿ ಕೌನ್ಸಿಲರ್‌ಗಳಿಗೆ ಸೂಚನೆ ನೀಡಲಾಗಿತ್ತು. ಇದರಿಂದ ನಾನು ನೊಂದಿದ್ದೇನೆ’ ಎಂದು ಸೆಹ್ರಾವತ್ ಆರೋಪಿಸಿದ್ದಾರೆ.

ಬವಾನಾ ವಾರ್ಡ್‌ನ ಎಎಪಿ ಕಾರ್ಪೊರೇಟರ್‌ ಪವನ್‌ ಅವರನ್ನು ಬಿಜೆಪಿಯ ದೆಹಲಿ ಘಟಕದ ಕಚೇರಿಯಲ್ಲಿ ಕಾರ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ ಮತ್ತು ಪ್ರಧಾನ ಕಾರ್ಯದರ್ಶಿ ಹರ್ಷ್ ಮಲ್ಹೋತ್ರಾ ಅವರು ಬಿಜೆಪಿಗೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ದೆಹಲಿ ಬಿಜೆಪಿಯ ಹಲವು ನಾಯಕರು ಉಪಸ್ಥಿತರಿದ್ದರು.

‘ಎಎಪಿ ಕಾರ್ಪೊರೇಟರ್‌ಗಳ ನಡುವೆ ಭಿನ್ನಾಭಿಪ್ರಾಯವಿದೆ’ ಎಂದು ಬಿಜೆಪಿ ನಾಯಕ ಮಲ್ಹೋತ್ರಾ ಹೇಳಿದರು. ಅಡ್ಡ ಮತದಾನದ ಮೇಲೆ ಕಣ್ಣಿಡಲೆಂದೇ, ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ವೇಳೆ ಮೊಬೈಲ್‌ ಕೊಂಡೊಯ್ಯುವಂತೆ ಸದಸ್ಯರಿಗೆ ಎಎಪಿ ಸೂಚನೆ ನೀಡಿದೆ ಎಂದು ಆರೋಪಿಸಿದರು.

ದೆಹಲಿ ಪಾಲಿಕೆ ಸ್ಥಾಯಿ ಸಮಿತಿಯ ಆರು ಸದಸ್ಯರ ಚುನಾವಣೆಗೆ ಇಂದು (ಶುಕ್ರವಾರ) ಸಮಯ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.