ನವದೆಹಲಿ: ‘ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ಕಾಪಾಡಲು’ ಬೆಂಬಲ ನೀಡುವಂತೆ ಕೋರಿ ಎಎಪಿ ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದೆ.
ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ‘ಡಿಪಿ’ ಬದಲಾಯಿಸುವ ಮೂಲಕ ಅಭಿಯಾನಕ್ಕೆ ಬೆಂಬಲ ನೀಡುವಂತೆ ಎಎಪಿ ನಾಯಕಿ, ದೆಹಲಿ ಸಚಿವೆ ಆತಿಶಿ ಅವರು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
ಎಎಪಿಯ ಎಲ್ಲ ನಾಯಕರು ಹಾಗೂ ಕಾರ್ಯಕರ್ತರು ತಮ್ಮ ಸಾಮಾಜಿಕ ಜಾಲತಾಣ ‘ಎಕ್ಸ್’, ಫೇಸ್ಬುಕ್, ವಾಟ್ಸ್ಆ್ಯಪ್ ಮತ್ತು ಇತರ ಖಾತೆಗಳಲ್ಲಿ ‘ಮೋದಿಯವರು ಹೆಚ್ಚು ಭಯಪಡುವ ವ್ಯಕ್ತಿ ಕೇಜ್ರಿವಾಲ್’ ಎಂಬ ಶೀರ್ಷಿಕೆಯೊಂದಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕಂಬಿಗಳ ಹಿಂದಿರುವ ಚಿತ್ರವನ್ನು ನೂತನ ಪ್ರೊಫೈಲ್ ಚಿತ್ರವನ್ನಾಗಿ ಬದಲಾಯಿಸುತ್ತಾರೆ ಎಂದು ಆತಿಶಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರಿಗೆ ಸವಾಲು ಹಾಕುವ ದೇಶದ ಏಕೈಕ ನಾಯಕ ಅರವಿಂದ ಕೇಜ್ರಿವಾಲ್. ಹೀಗಾಗಿಯೇ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದಿದ್ದರೂ ಲೋಕಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದೆ. ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಇ.ಡಿ ಎರಡು ವರ್ಷಗಳಿಂದ ತನಿಖೆ ನಡೆಸುತ್ತಿದ್ದರೂ ‘ಒಂದು ಪೈಸೆ’ ಸಾಕ್ಷ್ಯಾಧಾರವನ್ನು ನೀಡಲೂ ಸಾಧ್ಯವಾಗಿಲ್ಲ ಎಂದರು.
ಮೋದಿ ಮತ್ತು ಬಿಜೆಪಿ, ಕೇಜ್ರಿವಾಲ್ ಅವರನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ದೇಶದಲ್ಲಿ ಸರ್ವಾಧಿಕಾರದ ವಿರುದ್ಧ ಎಎಪಿ ಸಮರ ಸಾರಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ಕಾಪಾಡುವುದು ಕೇಜ್ರಿವಾಲ್ ಅವರದಷ್ಟೇ ಜವಾಬ್ದಾರಿ ಅಲ್ಲ. ಸಾಮಾಜಿಕ ಜಾಲತಾಣ ಖಾತೆಗಳ ‘ಡಿಪಿ’ ಬದಲಾಯಿಸುವ ಮೂಲಕ ಜನರು ಅಭಿಯಾನದಲ್ಲಿ ಪಾಲ್ಗೊಂಡು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.