ಚೆನ್ನೈ: ತನಗೆ ಕಿರುಕುಳ ನೀಡಲಾಗಿದೆ ಹಾಗೂ ಮನೆಯ ಮುಂಭಾಗದಲ್ಲಿ ಮೂತ್ರವಿಸರ್ಜನೆ ಮಾಡಿದ್ದಾರೆಎಂದು 62 ವರ್ಷದ ವಿಧವೆಯೊಬ್ಬರು ಆರೋಪ ಮಾಡಿದ ಎರಡು ವಾರಗಳ ಬಳಿಕ, ಚೆನ್ನೈ ಪೊಲೀಸರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ರಾಷ್ಟ್ರೀಯ ಅಧ್ಯಕ್ಷ ಡಾ.ಸುಬ್ಬಯ್ಯ ಶಣ್ಮುಗಂ ವಿರುದ್ಧ ಶನಿವಾರ ಎಫ್ಐಆರ್ ದಾಖಲಿಸಿದ್ದಾರೆ.
ಎರಡು ವಾರದ ಹಿಂದೆ ಮಹಿಳೆಯ ಸಂಬಂಧಿಕರಾದ ಬಾಲಾಜಿ ವಿಜಯರಾಘವನ್, ಅಡಂಬಾಕಂ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದರು. ‘ಮಹಿಳೆ ಹಾಗೂ ಸುಬ್ಬಯ್ಯ ಒಂದೇ ಅಪಾರ್ಟ್ಮೆಂಟ್ ಸಮುಚ್ಛಯದಲ್ಲಿ ವಾಸಿಸುತ್ತಿದ್ದರು. ನಮಗೆ ಮೀಸಲಾಗಿದ್ದ ಪಾರ್ಕಿಂಗ್ ಜಾಗವನ್ನು ಸುಬ್ಬಯ್ಯ ಕೇಳಿದ್ದರು. ಇದಕ್ಕೆ ಒಪ್ಪಿದ್ದ ನಾವು, ಬಳಕೆಗೆ ಹಣ ನೀಡಬೇಕು ಎಂದು ಕೇಳಿದ್ದೆವು. ಇಷ್ಟಕ್ಕೇ ಸುಬ್ಬಯ್ಯ ಅವರುಮಾತಿನ ಚಕಮಕಿಗೆ ಇಳಿದಿದ್ದು, ನಂತರದಲ್ಲಿ ಮಹಿಳೆಗೆ ಕಿರುಕುಳ ನೀಡಿದ್ದಾರೆ. ಮನೆಯ ಮುಂದೆ ಕೋಳಿಯ ಮಾಂಸ, ಬಳಸಿದ ಮುಖಗವಸು ಹಾಗೂ ತ್ಯಾಜ್ಯವನ್ನೂಎಸೆದಿದ್ದಾರೆ. ಮನೆಯ ಮುಂದೆ ಮೂತ್ರವಿಸರ್ಜನೆ ಮಾಡಿರುವುದಕ್ಕೆ ಸಿಸಿಟಿವಿ ಕ್ಯಾಮೆರಾ ಸಾಕ್ಷಿಯೂ ಇದೆ’ ಎಂದು ಬಾಲಾಜಿ ದೂರಿನಲ್ಲಿ ತಿಳಿಸಿದ್ದರು.
‘ರಾಜಕೀಯ ಸಂಬಂಧ’ದ ಕಾರಣಪೊಲೀಸರು ಆರೋಪಿಯ ವಿರುದ್ಧ ಎಫ್ಐಆರ್ ದಾಖಲಿಸುತ್ತಿಲ್ಲ ಎಂದು ವಿಜಯರಾಘವನ್ ಆರೋಪಿಸಿದ್ದರು. ಇದರ ಬೆನ್ನಲ್ಲೇ ಕಿಲ್ಪೌಕ್ ವೈದ್ಯಕೀಯ ಕಾಲೇಜಿನಲ್ಲಿ ಸರ್ಜಿಕಲ್ ಆಂಕೊಲಜಿ ವಿಭಾಗದ ಮುಖ್ಯಸ್ಥರೂ ಆಗಿರುವಸುಬ್ಬಯ್ಯ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ಆರೋಪವನ್ನು ಎಬಿವಿಪಿ ತಿರಸ್ಕರಿಸಿದ್ದು, ಇದು ಕಾಂಗ್ರೆಸ್ನ ವಿದ್ಯಾರ್ಥಿ ಘಟಕ ಎನ್ಎಸ್ಯುಐನ ಕುತಂತ್ರ ಎಂದು ಆರೋಪಿಸಿದೆ. ಸಿಸಿಟಿವಿ ಕ್ಯಾಮೆರಾದ ವಿಡಿಯೊ ತಿರುಚಲಾಗಿದೆ ಎಂದೂ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.