ನವದೆಹಲಿ: ‘ಸಾಕ್ಷ್ಯವು ಪೊಲೀಸ್ ವರದಿಯ ಅಂಶಗಳಿಗೆ ಭಿನ್ನವಾಗಿದ್ದರೆ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಯು ಎಫ್ಐಆರ್ಗೆ ಬದ್ಧರಾಗಿ ಇರಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಆರ್.ಸುಭಾಷ್ ರೆಡ್ಡಿ ಮತ್ತು ಹೃಷಿಕೇಶ್ ರಾಯ್ ಅವರಿದ್ದ ನ್ಯಾಯಪೀಠವು ಈ ಸಂಬಂಧ ನ್ಯಾಷನಲ್ ಇನ್ಸೂರನ್ಸ್ ಕಂಪನಿಯು ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿತು.
ಅಪಘಾತದಲ್ಲಿ ಮೃತಪಟ್ಟಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕರಾಗಿದ್ದ ಸುಭಾಷ್ ಬಾಬು ಎಂಬುವರ ವಿಧವಾ ಪತ್ನಿ ಮತ್ತು ಪುತ್ರನಿಗೆ ₹ 1.84 ಕೋಟಿ ಪರಿಹಾರ ನೀಡಬೇಕು ಎಂಬ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ವಿಮಾ ಕಂಪನಿ ಅರ್ಜಿ ಸಲ್ಲಿಸಿತ್ತು.
ಎಫ್ಐಆರ್ ಪ್ರಕಾರ, ಅಪಘಾತಕ್ಕೆ ಮೃತನ ನಿರ್ಲಕ್ಷ್ಯವೂ ಕಾರಣವಾಗಿದೆ ಎಂಬುದನ್ನು ಕಂಪನಿ ಉಲ್ಲೇಖಿಸಿತ್ತು. ದಾಖಲಾದ ಈ ಸಾಕ್ಷ್ಯವನ್ನು ಹೈಕೋರ್ಟ್ ಅಲಕ್ಷಿಸಿದೆ ಎಂದು ಹೇಳಿತ್ತು.
ಆದರೆ, ಮೃತನ ಕುಟುಂಬದ ವಕೀಲರು, ಮೃತ ಸುಭಾಷ್ ಬಾಬು ಅವರು ಮಾರುತಿ ಕಾರು ಚಾಲನೆ ಮಾಡುತ್ತಿದ್ದರು. ಮುಂದೆ ಹೋಗುತ್ತಿದ್ದ ಫಿಚರ್ ವ್ಯಾನ್ ಚಾಲಕ, ಯಾವುದೇ ಸೂಚನೆ ನೀಡದೇ ಏಕಾಏಕಿ ಬಲಕ್ಕೆ ತಿರುಗಿದ ಕಾರಣ ಅಪಘಾತ ಸಂಭವಿಸಿತ್ತು ಎಂದು ಗಮನಸೆಳೆದಿದ್ದರು.
ಆಗ ಕಾರಿನಲ್ಲಿದ್ದ ಮೃತನ ಪತ್ನಿಯ ಪ್ರತ್ಯಕ್ಷ ಸಾಕ್ಷಿಯನ್ನು ಪರಿಗಣಿಸಿದ ಕೋರ್ಟ್, ಈ ಕುರಿತು ಹೈಕೋರ್ಟ್ನ ತೀರ್ಮಾನ ಸರಿಯಾಗಿದೆ ಎಂದು ಹೇಳಿತ್ತು. ಪ್ರತ್ಯಕ್ಷ ಸಾಕ್ಷಿಯ ಹಿನ್ನೆಲೆಯಲ್ಲಿ ಎಫ್ಐಆರ್ ಅಂಶಗಳಿಗೆ ಬದ್ಧರಾಗಬೇಕಾದ ಅಗತ್ಯವಿಲ್ಲ ಎಂದೂ ಪೀಠವು ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.