ಚೆನ್ನೈ: ಏಷಿಯನ್ ಕಾಲೇಜ್ ಆಫ್ ಜರ್ನಲಿಸಂ (ಎಸಿಜೆ) ನೀಡುವ ‘ತನಿಖಾ ಪತ್ರಿಕೋದ್ಯಮ’ ಪ್ರಶಸ್ತಿಗೆ ‘ದಿ ಇಂಡಿಯನ್ ಎಕ್ಸ್ಪ್ರೆಸ್’ನ ಶ್ಯಾಮಲಾಲ್ ಯಾದವ್ ಮತ್ತು ಸಂದೀಪ್ ಸಿಂಗ್ ಅವರು ಆಯ್ಕೆಯಾಗಿದ್ದಾರೆ. ಅಯೋಧ್ಯೆ ರಾಮಮಂದಿರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ, ಚುನಾಯಿತ ಜನಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಸಂಬಂಧಿಗಳು ಅಯೋಧ್ಯೆಯಲ್ಲಿ ಜಮೀನು ಖರೀದಿಗೆ ತರಾತುರಿ ತೋರಿದ್ದರ ಕುರಿತು ಸಿದ್ಧಪಡಿಸಿದ್ದ ವರದಿಗೆ ಈ ಪ್ರಶಸ್ತಿ ಬಂದಿದೆ.
ಪ್ರೇಮಾ ಶ್ರೀದೇವಿ ಮತ್ತು ಹಿಮಾಂಶು ಕಾಲಾ ಅವರಿಗೆ ಕೆ.ಪಿ.ನಾರಾಯಣ ಕುಮಾರ್ ಸ್ಮರಣಾರ್ಥ ನೀಡಲಾಗುವ ‘ಸಾಮಾಜಿಕ ಪರಿಣಾಮ ಪತ್ರಿಕೋದ್ಯಮ’ ಪ್ರಶಸ್ತಿ ದೊರೆತಿದೆ. ದೆಹಲಿಯಲ್ಲಿ ಮಲಗುಂಡಿ ಸ್ವಚ್ಛಗೊಳಿಸುವ ಕಾರ್ಮಿಕರು, ಅವರ ಸ್ಥಿತಿಗತಿ, ಮಲಗುಂಡಿ ಸ್ವಚ್ಛಗೊಳಿಸುವ ವೇಳೆ ಸಂಭವಿಸಿದ ಸಾವುಗಳ ಬಗ್ಗೆ ಪ್ರೇಮಾ ಶ್ರೀದೇವಿ ಮತ್ತು ಹಿಮಾಂಶು ಕಾಲಾ ಅವರು ಸಿದ್ಧಪಡಿಸಿದ್ದ ಸಾಕ್ಷ್ಯಚಿತ್ರಕ್ಕಾಗಿ ಈ ಪ್ರಶಸ್ತಿ ದೊರೆತಿದೆ. ಈ ಸಾಕ್ಷ್ಯಚಿತ್ರವನ್ನು ‘ದಿ ಪ್ರೋಬ್’ ಸಂಸ್ಥೆ ನಿರ್ಮಿಸಿತ್ತು.
ಎರಡೂ ಪ್ರಶಸ್ತಿಗಳು ನಗದು ಬಹುಮಾನ, ಟ್ರೋಫಿ ಮತ್ತು ಪ್ರಶಸ್ತಿ ಫಲಕವನ್ನು ಹೊಂದಿವೆ. ‘ತನಿಖಾ ಪತ್ರಿಕೋದ್ಯಮ’ ಪ್ರಶಸ್ತಿಯು ₹2 ಲಕ್ಷ ನಗದು ಮತ್ತು‘ಸಾಮಾಜಿಕ ಪರಿಣಾಮ ಪತ್ರಿಕೋದ್ಯಮ’ ಪ್ರಶಸ್ತಿಯು ₹1 ಲಕ್ಷ ನಗದು ಬಹುಮಾನ ಒಳಗೊಂಡಿದೆ.
ಚೆನ್ನೈನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.