ರತ್ಲಾಮ್, ಮಧ್ಯಪ್ರದೇಶ: ಸಾಮೂಹಿಕ ಅತ್ಯಾಚಾರದ ಪ್ರಕರಣದಿಂದ ಖುಲಾಸೆಗೊಂಡ ಮಧ್ಯಪ್ರದೇಶದ ರತ್ಲಾಮ್ನ ವ್ಯಕ್ತಿಯೊಬ್ಬರು, ತನಗಾದ ನೋವು ಮತ್ತು ಮಾನಸಿಕ ಯಾತನೆಗಾಗಿ ₹ 10,000 ಕೋಟಿಗೂ ಹೆಚ್ಚು ಪರಿಹಾರ ಒದಗಿಸುವಂತೆ ಮಧ್ಯಪ್ರದೇಶ ಸರ್ಕಾರದ ವಿರುದ್ಧ ದಾವೆ ಹೂಡಿದ್ದಾರೆ.
ಕಾಂತು ಅಲಿಯಾಸ್ ಕಾಂತಿಲಾಲ್ ಭೀಲ್ (35) ಎಂಬುವವರು ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದರು. ಒಟ್ಟು ₹10,006.2 ಪರಿಹಾರ ಕೋರಿದ್ದಾರೆ. ಈ ಪೈಕಿ ₹ 2 ಲಕ್ಷವನ್ನು, ಸಹಜ ಲೈಂಗಿಕ ಕ್ರಿಯೆ ಸೇರಿದಂತೆ ಇತರೆ ಕಾರ್ಯಗಳನ್ನು ಮಾಡಲಾಗದಿದ್ದಕ್ಕೆ ನೀಡಬೇಕು ಹಾಗೂ ಕಾನೂನು ಹೋರಾಟದ ವೆಚ್ಚಗಳು ಸೇರಿದಂತೆ ಇತರ ಖರ್ಚು ವೆಚ್ಚಗಳಿಗೆ ₹ 6 ಕೋಟಿ ಪರಿಹಾರ ಒದಗಿಸಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ.
ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯವು 2022ರ ಅಕ್ಟೋಬರ್ 20ರಂದು ಕಾಂತು ಅವರನ್ನು ಸಾಮೂಹಿಕ ಅತ್ಯಾಚಾರ ಪ್ರಕರಣದಿಂದ ಖುಲಾಸೆಗೊಳಿಸಿದೆ ಎಂದು ಅವರ ಪರ ವಕೀಲ ವಿಜಯ್ ಸಿಂಗ್ ಯಾದವ್ ತಿಳಿಸಿದ್ದಾರೆ. ಪರಿಹಾರ ಕೋರಿ ಮಧ್ಯ ಪ್ರದೇಶ ಸರ್ಕಾರ ಮತ್ತು ತನಿಖಾಧಿಕಾರಿಗಳ ವಿರುದ್ಧ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಜನವರಿ 10ರಂದು ನಡೆಯಲಿದೆ.
‘ಮಾನವ ಜೀವನ ಅಮೂಲ್ಯ’ವಾದದ್ದು, ಅಲ್ಲದೆ ಈ ಅವಧಿಯಲ್ಲಿ ಅವರು ಮತ್ತು ಅವರ ಕುಟುಂಬದ ಸದಸ್ಯರು ಅನುಭವಿಸಿದ ಮಾನಸಿಕ ಯಾತನೆ ಅಪಾರವಾದದ್ದು. ಹೀಗಾಗಿ ₹ 10,000 ಕೋಟಿಗೂ ಹೆಚ್ಚು ಪರಿಹಾರಕ್ಕೆ ಅರ್ಜಿ ಸಲ್ಲಿಸಲಾಗಿದೆ’ ಎಂದು ವಕೀಲ ಯಾದವ್ ಪ್ರತಿಕ್ರಿಯಿಸಿದರು.
‘ಸಾಮೂಹಿಕ ಅತ್ಯಾಚಾರದ ನಕಲಿ ಆರೋಪಗಳ ಮೇಲೆ ಪೊಲೀಸರು ನನ್ನನ್ನು 2020ರ ಡಿಸೆಂಬರ್ 23ರಂದು ಬಂಧಿಸಿದ್ದರು. ನನ್ನ ಕುಟುಂಬಕ್ಕೆ ನಾನೊಬ್ಬನೇ ಆಧಾರ. ನನ್ನ ಬಂಧನದಿಂದ ವಯಸ್ಸಾದ ತಾಯಿ, ಪತ್ನಿ ಮತ್ತು ಮೂವರು ಮಕ್ಕಳಿಗೆ ಅಪಾರ ಸಂಕಷ್ಟ ಎದುರಾಗಿತ್ತು. ಅವರು ಹಸಿವಿನಿಂದ ದಿನಗಳನ್ನು ಕಳೆಯುವಂತಾಯಿತು’ ಎಂದು ಕಾಂತು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ವಕೀಲ ಯಾದವ್ ಅವರ ಪ್ರಕಾರ, ಮಹಿಳೆಯೊಬ್ಬರು ಕಾಂತು ಅವರ ವಿರುದ್ಧ ಮಾನಸಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ಪ್ರಕರಣ ದಾಖಲಿಸಿದ್ದರು. ತನ್ನನ್ನು ಸಹೋದರನ ಮನೆಗೆ ಬಿಡುವ ನೆಪದಲ್ಲಿ ಕರೆದೊಯ್ದ ಕಾಂತು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಗಿ ದೂರಿನಲ್ಲಿ ತಿಳಿಸಿದ್ದರು. ಆ ಬಳಿಕ ಕಾಂತು ತನ್ನನ್ನು ಬೇರೊಬ್ಬ ವ್ಯಕ್ತಿಗೆ ಹಸ್ತಾಂತರಿಸಿದ. ಆತ ತನ್ನ ಮೇಲೆ ಆರು ತಿಂಗಳು ಅತ್ಯಾಚಾರ ಎಸಗಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.