ನವದೆಹಲಿ: ‘ಸುಪ್ರೀಂಕೋರ್ಟ್ನಲ್ಲಿ ನಡೆಯುವ ಕಲಾಪಗಳನ್ನು ನೇರ ಪ್ರಸಾರ ಮಾಡಬೇಕು ಎಂಬ ಪ್ರಸ್ತಾವವನ್ನು ಕಾರ್ಯರೂಪಕ್ಕೆ ತರಲು ನಾನು ಒಲವು ಹೊಂದಿದ್ದೇನೆ’ ಎಂದು ಸುಪ್ರೀಂಕೋರ್ಟ್ನ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಗುರುವಾರ ಹೇಳಿದರು.
ಸುಪ್ರೀಂಕೋರ್ಟ್ ವರ್ಚುವಲ್ ವಿಧಾನದ ಮೂಲಕ ನಡೆಸುವ ಕಲಾಪಗಳನ್ನು ಮಾಧ್ಯಮ ಪ್ರತಿನಿಧಿಗಳೂ ವೀಕ್ಷಿಸಲು ಸಾಧ್ಯವಾಗುವ ಸಲುವಾಗಿ ಅಭಿವೃದ್ಧಿಪಡಿಸಿರುವ ಆ್ಯಪ್ನ ಅನಾವರಣ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಇದನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರುವ ಮುನ್ನ, ಸುಪ್ರೀಂಕೋರ್ಟ್ನ ಸಹೋದ್ಯೋಗಿಗಳಲ್ಲಿ ಒಮ್ಮತ ಮೂಡಿಸಬೇಕು. ಈ ನಿಟ್ಟಿನಲ್ಲಿ ಪ್ರಯತ್ನಿಸುವೆ’ ಎಂದು ಅವರು ಹೇಳಿದರು.
ತಾವು ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ದಿನಗಳನ್ನು ಮೆಲುಕು ಹಾಕಿದ ಅವರು, ‘ಕೋರ್ಟ್ ಕಲಾಪಗಳ ಕುರಿತು ವರದಿ ಮಾಡುವಾಗ ಪತ್ರಕರ್ತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು ನನ್ನ ಅರಿವಿಗೆ ಬಂದಿತ್ತು. ಮಾಹಿತಿಗಾಗಿ ಬಹಳಷ್ಟು ಸಂದರ್ಭಗಳಲ್ಲಿ ಅವರು ವಕೀಲರ ಮೇಲೆಯೇ ಅವಲಂಬಿತರಾಗಿರಬೇಕಾಗುತ್ತಿತ್ತು’ ಎಂದರು.
‘ಪತ್ರಕರ್ತರು ಕೋರ್ಟ್ ಕಲಾಪಗಳಿಗೆ ಹಾಜರಾಗಲು ಅನುಕೂಲವಾಗುವಂಥ ವ್ಯವಸ್ಥೆಯನ್ನು ರೂಪಿಸಬೇಕು ಎಂಬ ಬೇಡಿಕೆ ಆಗಲೇ ಕೇಳಿಬಂದಿದ್ದವು‘ ಎಂದೂ ಹೇಳಿದರು.
ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮಾತನಾಡಿ, ‘ಸುಪ್ರೀಂಕೋರ್ಟ್ನ ಸಿಬ್ಬಂದಿಯೇ ಈ ಆ್ಯಪ್ನ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಈ ಕಾರ್ಯದಲ್ಲಿ ತೊಡಗಿದ್ದ ಆರು ಜನರಿಗೆ ಕೋವಿಡ್–19 ದೃಢಪಟ್ಟಿದೆ’ ಎಂದರು.
ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್, ಹೇಮಂತ್ ಗುಪ್ತ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.