ನವದೆಹಲಿ: ‘ಅದಾನಿ ಸಮೂಹದ ಕಂಪನಿಗಳ ಷೇರು ಮೌಲ್ಯದಲ್ಲಿ ಕುಸಿತ ಉಂಟಾಗಿರುವುದರಿಂದ ಎಲ್ಐಸಿ ಹಾಗೂ ಎಸ್ಬಿಐಗೆ ₹78 ಸಾವಿರ ಕೋಟಿಗೂ ಅಧಿಕ ಮೊತ್ತ ನಷ್ಟವಾಗಿದೆ. ಇಷ್ಟಾದರೂ ಹಣಕಾಸು ಸಚಿವರು ಹಾಗೂ ತನಿಖಾ ಸಂಸ್ಥೆಗಳು ಮೌನಕ್ಕೆ ಶರಣಾಗಿರುವುದು ಏಕೆ’ ಎಂದು ಕಾಂಗ್ರೆಸ್ ಶನಿವಾರ ಪ್ರಶ್ನಿಸಿದೆ.
‘ಅದಾನಿ ಸಮೂಹವು ಷೇರು ಬೆಲೆಯ ಮೇಲೆ ಕೃತಕವಾಗಿ ಪರಿಣಾಮ ಬೀರುವ ಕೆಲಸದಲ್ಲಿ ಹಾಗೂ ಲೆಕ್ಕಪತ್ರಗಳ ವಂಚನೆಯಲ್ಲಿ ತೊಡಗಿದೆ ಎಂದು ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ‘ಹಿಂಡನ್ಬರ್ಗ್ ರಿಸರ್ಚ್’ ಆರೋಪಿಸಿದೆ. ಹೀಗಿದ್ದರೂ ಎಲ್ಐಸಿ ಹಾಗೂ ಎಸ್ಬಿಐ, ಅದಾನಿ ಸಮೂಹದಲ್ಲಿ ಹೂಡಿಕೆ ಮುಂದುವರಿಸಿವೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.
‘ಎಲ್ಐಸಿಯಲ್ಲಿರುವುದು ಸಾರ್ವಜನಿಕರ ಹಣ. ‘ಹಿಂಡನ್ಬರ್ಗ್ ರಿಸರ್ಚ್’ ವರದಿ ಬಳಿಕ ಎಲ್ಐಸಿಯ ಹೂಡಿಕೆ ಮೌಲ್ಯ ₹77 ಸಾವಿರ ಕೋಟಿಯಿಂದ ₹53 ಸಾವಿರ ಕೋಟಿಗೆ ಕುಸಿದಿದೆ. ಸಂಸ್ಥೆಗೆ ₹ 23,500 ಕೋಟಿ ನಷ್ಟ ಉಂಟಾಗಿದೆ. ಎಲ್ಐಸಿ ಷೇರು ಮೌಲ್ಯವು ₹22,442 ಕೋಟಿಯಷ್ಟು ನಷ್ಟವಾಗಿದೆ. ಹೀಗಿದ್ದರೂ ಎಲ್ಐಸಿ, ಅದಾನಿ ಸಮೂಹದಲ್ಲಿ ₹300 ಕೋಟಿ ಹೂಡಿಕೆ ಮಾಡುತ್ತಿರುವುದು ಏಕೆ’ ಎಂದು ಅವರು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.