ADVERTISEMENT

ಆಮ್ಲಜನಕದ ಹೆಸರಲ್ಲಿ ವಿಪಕ್ಷಗಳು 'ಬ್ಲ್ಯಾಕ್ ಮೇಲ್' ಮಾಡಿದವು: ಯೋಗಿ

ಪಿಟಿಐ
Published 11 ಅಕ್ಟೋಬರ್ 2021, 14:16 IST
Last Updated 11 ಅಕ್ಟೋಬರ್ 2021, 14:16 IST
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್   

ಕಾನ್ಪುರ: ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳು ವೈದ್ಯಕೀಯ ಆಮ್ಲಜನಕದ ಕೊರತೆಯನ್ನು ಹೇಳಿಕೊಂಡು 'ಬ್ಲ್ಯಾಕ್ ಮೇಲ್' ಮಾಡಿದವು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೋಮವಾರ ಆರೋಪಿಸಿದ್ದಾರೆ.

ಕಾನ್ಪುರದ ಐಐಟಿಯಲ್ಲಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರವು ಆಮ್ಲಜನಕ ಬಳಕೆ ಕುರಿತಂತೆ ಲೆಕ್ಕಪರಿಶೋಧನೆಗೆ ಆದೇಶಿಸಿದ ಬಳಿಕ ಜೀವ ಉಳಿಸುವ ಅನಿಲದ ಬೇಡಿಕೆ ‘ಅರ್ಧಕ್ಕೆ ಇಳಿದಿದೆ’ ಎಂದು ಹೇಳಿದ್ದಾರೆ.

‘ವಿವಿಧ ರಾಜ್ಯಗಳು ಆಮ್ಲಜನಕಕ್ಕಾಗಿ ಒತ್ತಾಯಿಸುತ್ತಿದ್ದದ್ದನ್ನು ನೀವು ನೋಡಿರಬಹುದು. ಕೇಂದ್ರವು ಆಮ್ಲಜನಕದ ಲೆಕ್ಕಪರಿಶೋಧನೆಯನ್ನು ಘೋಷಿಸಿದ ತಕ್ಷಣ, ಅವರ ಬೇಡಿಕೆ ಅರ್ಧಕ್ಕೆ ಕುಸಿಯಿತು. ಬಿಕ್ಕಟ್ಟಿನ ಸಂದರ್ಭದಲ್ಲಿ ಅವರು ಪೊಲಿಟಿಲಿಕಲ್ ಬ್ಲಾಕ್‌ಮೇಲ್ ಮಾರ್ಗ ಅನುಸರಿಸಿದರು’ ಎಂದು ಆದಿತ್ಯನಾಥ್ ಆರೋಪಿಸಿದರು.

ADVERTISEMENT

ದೇಶದ ಕಲ್ಲಿದ್ದಲು ಕೊರತೆ ಪರಿಸ್ಥಿತಿಯನ್ನು ಕೊರೊನಾ ಬಿಕ್ಕಟ್ಟಿನ ಸಂದರ್ಭದ ಆಮ್ಲಜನಕದ ಕೊರತೆಗೆ ಹೋಲಿಸಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿಕೆ ನೀಡಿದ ಬೆನ್ನಲ್ಲೇ ಆದಿತ್ಯನಾಥ್ ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.

ಕಲ್ಲಿದ್ದಲು ಬಿಕ್ಕಟ್ಟು ಇದೆ ಎಂದು ಒಪ್ಪಿಕೊಳ್ಳಲು ಕೇಂದ್ರ ಸಿದ್ಧವಿಲ್ಲ ಎಂದು ಸಿಸೋಡಿಯಾ ಆರೋಪಿಸಿದ್ದರು.

ಕಾರ್ಯಕ್ರಮದಲ್ಲಿ ಸರ್ಕಾರದ ಹಲವಾರು ಸಾಧನೆಗಳನ್ನು ಬಿಚ್ಚಿಟ್ಟ ಆದಿತ್ಯನಾಥ್, ಸೋಮವಾರ ಉತ್ತರ ಪ್ರದೇಶದಲ್ಲಿ ಪತ್ತೆಯಾದ 13 ಕೋವಿಡ್ -19 ರೋಗಿಗಳು ಮಹಾರಾಷ್ಟ್ರ, ಕೇರಳ ಅಥವಾ ಪಶ್ಚಿಮ ಬಂಗಾಳದಿಂದ ಬಂದವರು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.