ನವದೆಹಲಿ: ‘ಚಂದ್ರನನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕು ಹಾಗೂ ಚಂದ್ರಯಾನ–3 ಬಾಹ್ಯಾಕಾಶ ನೌಕೆಯು ಇಳಿದ ಜಾಗವನ್ನು ರಾಜಧಾನಿಯನ್ನಾಗಿ ಮಾಡಬೇಕು ಎನ್ನುವ ವಿಶಿಷ್ಟ ಬೇಡಿಕೆಯನ್ನು ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಘಟಕದ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿಟ್ಟಿದ್ದಾರೆ.
‘ಬೇರೆ ಧರ್ಮದವರು ಚಂದ್ರನನ್ನು ತಮ್ಮದೆಂದು ಪ್ರತಿಪಾದಿಸುವ ಮುನ್ನ ಭಾರತ ಸರ್ಕಾರವು ಚಂದ್ರನ ಮಾಲೀಕತ್ವವನ್ನು ಪ್ರತಿಪಾದಿಸಿ, ಈ ಕುರಿತು ಸಂಸತ್ತಿನಲ್ಲಿ ನಿರ್ಣಯವನ್ನು ಅಂಗೀಕರಿಸಬೇಕು’ ಎಂದೂ ಅವರು ಒತ್ತಾಯಿಸಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳವನ್ನು ಪ್ರಧಾನಿ ಮೋದಿ ಅವರು ಈಚೆಗಷ್ಟೇ ‘ಶಿವಶಕ್ತಿ ಪಾಯಿಂಟ್’ ಎಂದು ನಾಮಕರಣ ಮಾಡಿದ್ದರು.
ಚಂದ್ರನನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕೆಂಬ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹಂಚಿಕೊಂಡಿರುವ ಸ್ವಾಮಿ ಚಕ್ರಪಾಣಿ ಮಹಾರಾಜ್ ಅವರು, ‘ಚಂದ್ರನನ್ನು ‘ಸನಾತನ ಹಿಂದೂ ರಾಷ್ಟ್ರವೆಂದು ಸಂಸತ್ತು ಘೋಷಿಸಬೇಕು. ‘ಶಿವಶಕ್ತಿ ಪಾಯಿಂಟ್’ ಅನ್ನು ಚಂದ್ರನ ರಾಜಧಾನಿಯನ್ನಾಗಿ ಮಾಡಬೇಕು. ಇದರಿಂದ ಜಿಹಾದಿ ಮನಃಸ್ಥಿತಿ ಉಳ್ಳ ಯಾವುದೇ ಉಗ್ರಗಾಮಿ ಅಲ್ಲಿ ತಲುಪಲಾರ. ಈ ನಿಟ್ಟಿನಲ್ಲಿ ಭಾರತ ಸರ್ಕಾರವು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು’ ಎಂದೂ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.