ADVERTISEMENT

ಅಪರಾಧಿಕ ನಂಬಿಕೆ ದ್ರೋಹ, ವಂಚನೆಯ ನಡುವೆ ವ್ಯತ್ಯಾಸವಿದೆ: ಸುಪ್ರೀಂ ಕೋರ್ಟ್

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 23:56 IST
Last Updated 23 ಆಗಸ್ಟ್ 2024, 23:56 IST
   

ನವದೆಹಲಿ: ಭಾರತೀಯ ದಂಡ ಸಂಹಿತೆಯು (ಐಪಿಸಿ) ಹಲವಾರು ವರ್ಷಗಳಿಂದ ಜಾರಿಯಲ್ಲಿದ್ದರೂ ನ್ಯಾಯಾಲಯ ಮತ್ತು ಪೊಲೀಸರು ಅಪರಾಧಿಕ ನಂಬಿಕೆ ದ್ರೋಹ ಮತ್ತು ವಂಚನೆ ನಡುವಿನ ವ್ಯತ್ಯಾಸವನ್ನು ಅರ್ಥೈಸಿಕೊಂಡಿಲ್ಲ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ವಿಷಾದ ವ್ಯಕ್ತಪಡಿಸಿದೆ. ಐಪಿಸಿ ಬದಲಿಗೆ ಇತ್ತೀಚೆಗೆ ಭಾರತೀಯ ನ್ಯಾಯ ಸಂಹಿತೆ ಅನುಷ್ಠಾನಕ್ಕೆ ಬಂದಿದೆ.

ನ್ಯಾಯಾಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್‌ ಮಿಶ್ರಾ ಅವರು ಇದ್ದ ನ್ಯಾಯಪೀಠವು, ಅಪರಾಧಿಕ ನಂಬಿಕೆ ದ್ರೋಹ ಮತ್ತು ವಂಚನೆಗೆ ಸಂಬಂಧಿಸಿದ ದೂರುಗಳಿಗೆ ಒಂದೇ ರೀತಿಯ ಎಫ್‌ಐಆರ್‌ ದಾಖಲಿಸುವುದು ಪೊಲೀಸರಿಗೆ ರೂಢಿಯಾಗಿದೆ ಎಂದಿದೆ.

ವಾಸ್ತವವಾಗಿ ಎರಡೂ ಅಪರಾಧಗಳು ವಿಭಿನ್ನವಾಗಿವೆ ಎಂದ ಪೀಠ, ದೇಶದಲ್ಲಿನ ಪೊಲೀಸ್‌ ಅಧಿಕಾರಿಗಳಿಗೆ ಕಾನೂನುಗಳ ಬಗ್ಗೆ ಸೂಕ್ತ ತರಬೇತಿ ನೀಡಬೇಕಾದ ಅಗತ್ಯವಿದೆ ಎಂದು ಹೇಳಿದೆ.

ADVERTISEMENT

ಅಪರಾಧಿಕ ನಂಬಿಕೆ ದ್ರೋಹ ಮತ್ತು ವಂಚನೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಉತ್ತರಪ್ರದೇಶದ ಕುರ್ಜಾ ನಗರದ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್‌ ಅವರು ಜಾರಿಗೊಳಿಸಿದ್ದ ಸಮನ್ಸ್ ಅನ್ನು ಪ್ರಶ್ನಿಸಿ ದೆಹಲಿ ರೇಸ್‌ ಕ್ಲಬ್‌(1949) ಲಿಮಿಟೆಡ್‌ ಮತ್ತು ಇತರರು ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ಪುರಸ್ಕರಿಸಿದೆ.

ದೂರುದಾರರು ಕ್ರಿಮಿನಲ್ ಮೊಕದ್ದಮೆ ಬದಲು ಮೇಲ್ಮನವಿದಾರರ ವಿರುದ್ಧ ಸಿವಿಲ್ ಮೊಕದ್ದಮೆಯನ್ನು ಹೂಡಬಹುದು ಎಂದು ಕೋರ್ಟ್ ಸಲಹೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.