ನವದೆಹಲಿ: ಉತ್ತರ ಪ್ರದೇಶ ಸರ್ಕಾರ ಆಗ್ರಾದ ಖಾಸಗಿ ಆಸ್ಪತ್ರೆಯಲ್ಲಿ ಆಮ್ಲಜನಕ ವಿತರಣೆ ಕುರಿತು ನಡೆದ ‘ಅಣಕು ಕಾರ್ಯಾಚರಣೆ‘ಯ ಹಿಂದಿನ ಸತ್ಯವನ್ನು ಹೊರಗೆಳೆದು, ತಪ್ಪಿತಸ್ಥರನ್ನು ಶಿಕ್ಷಿಸುತ್ತದೆಯೇ? ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕಟವಾದ ಮಾಧ್ಯಮಗಳ ವರದಿಯ ತುಣುಕುಗಳನ್ನು ಟ್ಯಾಗ್ ಮಾಡಿದ್ದಾರೆ.
ಈ ಅಣಕು ಕಾರ್ಯಾಚರಣೆ ವೇಳೆ ಐದು ನಿಮಿಷಗಳ ಕಾಲ ಆಮ್ಲಜನಕ ಪೂರೈಕೆ ಕಡಿತಗೊಂಡಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಉತ್ತರ ಪ್ರದೇಶ ಸರ್ಕಾರ ಸತ್ಯವನ್ನು ಹೊರಗೆಳೆಯುತ್ತದೆಯೇ ಮತ್ತು ತಪ್ಪಿತಸ್ಥರನ್ನು ಶಿಕ್ಷಿಸುತ್ತದೆಯೇ? ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ತೀವ್ರವಾಗಿ ಆಮ್ಲಜನಕದ ಕೊರತೆ ಇದ್ದರೂ, ಅಲ್ಲಿನ ಸರ್ಕಾರ ಮಾತ್ರ, ‘ಆಮ್ಲಜನಕ ಕೊರತೆ ಇಲ್ಲ‘ ಎಂದು ಹೇಳುತ್ತಲೇ ಇತ್ತು. ಆಗ್ರಾದ ಜಿಲ್ಲಾಡಳಿತವೂ ಅದಕ್ಕೆ ಧ್ವನಿ ಗೂಡಿಸಿತ್ತು. ಆದರೆ, ರಾಜ್ಯದಾದ್ಯಂತ ಆಮ್ಲಜನಕದ ಕೊರತೆಯಿಂದ ರೋಗಿಗಳು ತೀವ್ರ ಪರಿತಪಿಸಿದರು, ಕೆಲವರು ಪ್ರಾಣ ಕಳೆದುಕೊಂಡರು‘ ಎಂದು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಆಗ್ರಾದ ಖಾಸಗಿ ಆಸ್ಪತ್ರೆಯಿಂದ ವಿಡಿಯೊ ತುಣಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಆಗ್ರಾ ಆಡಳಿತ ಪ್ರಕರಣ ಕುರಿತು ತನಿಖೆಗೆ ಆದೇಶಿಸಿತು.
ಆ ವಿಡಿಯೊದಲ್ಲಿ ಖಾಸಗಿ ಆಸ್ಪತ್ರೆಯ ಮಾಲೀಕರು ‘ಅಣಕು ಕಾರ್ಯಾಚರಣೆ‘ ನಡೆಸಿದ್ದಾರೆಂದು ಹೇಳಿದ್ದರು. ಈ ಕಾರ್ಯಾಚರಣೆ ವೇಳೆ ಕೋವಿಡ್ ರೋಗಿಗಳಿಗೆ ಐದು ನಿಮಿಷಗಳ ಕಾಲ ಆಮ್ಲಜನಕದ ಪೂರೈಕೆಯನ್ನು ಕಡಿತಗೊಳಿಸಲಾಗಿದೆ ಎಂದು ಹೇಳಲಾಗಿತ್ತು. ಆಮ್ಲಜನಕದ ಪೂರೈಕೆ ಕಡಿತಗೊಳಿಸಿದ ನಂತರ ಕೆಲವು ರೋಗಿಗಳ ದೇಹ ನೀಲಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸಿವೆ ಎಂಬ ಅಂಶವೂ ವಿಡಿಯೊದಲ್ಲಿ ಇತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.