ಚೆನ್ನೈ: ಎಐಎಡಿಎಂಕೆ ಪಕ್ಷದ ನಾಯಕತ್ವವನ್ನು ಯಾರು ವಹಿಸಬೇಕು ಎಂದು ನಿರ್ಧರಿಸುವ ಮಹತ್ವದ ಸಭೆ ಗುರುವಾರ ನಡೆಯಲಿದ್ದು, ಅದಕ್ಕೂ ಮೊದಲೇಸಂಯೋಜಕ ಸ್ಥಾನಕ್ಕೆ ಓ.ಪನ್ನೀರ್ಸೆಲ್ವಂ ಅವರು ರಾಜೀನಾಮೆ ನೀಡಿದ್ದಾರೆ.
ಹಲವು ವರ್ಷಗಳಿಂದ ಪಕ್ಷದಲ್ಲಿನ ಸಂಯೋಜಕ, ಜಂಟಿ ಸಂಯೋಜಕ ಹುದ್ದೆಗಳನ್ನು ಕ್ರಮವಾಗಿಪನ್ನೀರ್ಸೆಲ್ವಂ ಮತ್ತು ಕೆ.ಪಳನಿಸ್ವಾಮಿ ಹೊಂದಿದ್ದಾರೆ. ಆದರೆ, ಪಕ್ಷದ ನಾಯಕತ್ವವನ್ನು ಒಬ್ಬರೇ ವಹಿಸಬೇಕು ಎಂಬ ಚರ್ಚೆ ಈಚೆಗೆ ಶುರುವಾಗಿದ್ದು, ಗುರುವಾರ ನಡೆಯುವ ಪಕ್ಷದ ಸಾಮಾನ್ಯ ಮತ್ತುಕಾರ್ಯಕಾರಿ ಮಂಡಳಿಯಲ್ಲಿ ಈ ಬಗ್ಗೆ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.
ಜಂಟಿ ಸಂಯೋಜಕ ಕೆ. ಪಳನಿಸ್ವಾಮಿ ಅವರಿಗೆ ಪಕ್ಷದ ಸರ್ವೋಚ್ಚ ನಾಯಕನ ಸ್ಥಾನ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಮುಜುಗರದಿಂದ ಪಾರಾಗಲು ಪನ್ನಿರ್ಸೆಲ್ವಂ ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ‘ಧರ್ಮ ಮತ್ತೆ ಗೆಲ್ಲುತ್ತದೆ’ಎಂದಿದ್ದಾರೆ.
‘ಪಕ್ಷದಲ್ಲಿ ಪಳನಿಸ್ವಾಮಿ ಮೇಲುಗೈ ಸಾಧಿಸಿದ್ದು, ಸೂಕ್ತ ಸ್ಥಾನ ಪಡೆಯಲು ಏನು ಬೇಕಾದರೂ ಮಾಡುತ್ತಾರೆ‘ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಪಳನಿಸ್ವಾಮಿ ಬಣ ಚುನಾವಣಾ ಆಯೋಗವನ್ನು ಸಂಪರ್ಕಿಸುವ ಸಾಧ್ಯತೆ ಇದೆ ಎಂದು ಎಐಎಡಿಎಂಕೆ ಮೂಲಗಳು ತಿಳಿಸಿವೆ. ಪಕ್ಷದ ನಾಯಕತ್ವ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಸಂಬಂಧ ಮಧ್ಯಸ್ಥಿಕೆ ಕೋರಿ ನಗರದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.