ADVERTISEMENT

ಉ.ಪ್ರ: ರಾಹುಲ್ – ಅಖಿಲೇಶ್ ಜಂಟಿ ಸುದ್ದಿಗೋಷ್ಠಿ; ಬಿಜೆಪಿ ವಿರುದ್ಧ ವಾಗ್ದಾಳಿ

ಪಿಟಿಐ
Published 17 ಏಪ್ರಿಲ್ 2024, 6:06 IST
Last Updated 17 ಏಪ್ರಿಲ್ 2024, 6:06 IST
<div class="paragraphs"><p>ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್</p></div>

ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್

   

ಪಿಟಿಐ

ಗಾಜಿಯಾಬಾದ್‌(ಉತ್ತರ ಪ್ರದೇಶ): ಲೋಕಸಭಾ ಚುನಾವಣೆಗೆ ಮುನ್ನ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪ‍ಕ್ಷದ ನಾಯಕ ಅಖಿಲೇಶ್ ಯಾದವ್ , ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ADVERTISEMENT

‘ನಿರುದ್ಯೋಗ ದೇಶದ ಮೊದಲ ದೊಡ್ಡ ಸಮಸ್ಯೆಯಾದರೆ, ಹಣದುಬ್ಬರ ಎರಡನೇ ದೊಡ್ಡ ಸಮಸ್ಯೆಯಾಗಿದೆ. ಈ ಚುನಾವಣೆಯಲ್ಲಿ ಇದೇ ನಿರ್ಣಾಯಕ ವಿಷಯಗಳಾಗಿವೆ. ಆದರೆ ಪ್ರಧಾನಿಯಾಗಲಿ, ಬಿಜೆಪಿಯಾಗಲಿ ಈ ಬಗ್ಗೆ ಒಂದೂ ಮಾತನಾಡುತ್ತಿಲ್ಲ’ ಎಂದು ರಾಹುಲ್ ಕಿಡಿಕಾರಿದರು.

‘ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ್ದರು. ಸಂದರ್ಶನ ವೇಳೆ ಪಾರದರ್ಶಕತೆ, ಸ್ವಚ್ಛ ರಾಜಕಾರಣಕ್ಕಾಗಿ ಚುನಾವಣಾ ಬಾಂಡ್‌ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಪ್ರಧಾನಿ ಹೇಳುತ್ತಾರೆ. ಮೋದಿ ಅವರು ಪಾರದರ್ಶಕತೆ ತರಲು ಬಯಸಿದರೆ ಬಿಜೆಪಿಗೆ ಹಣ ನೀಡಿದವರ ಹೆಸರನ್ನು, ಹಣ ನೀಡಿದ ದಿನಾಂಕಗಳನ್ನು ಏಕೆ ಮರೆಮಾಡಿದ್ದರು? ಚುನಾವಣಾ ಬಾಂಡ್‌ ಇಡೀ ವಿಶ್ವದಲ್ಲೇ ಅತಿ ದೊಡ್ಡ ಹಗರಣವಾಗಿದೆ’ ಎಂದು ಹೇಳಿದರು.

‘ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷ ಎಷ್ಟು ಸ್ಥಾನ ಗೆಲ್ಲಬಹುದು ಎಂಬ ಬಗ್ಗೆ ಈಗಲೇ ಹೇಳಲು ಬರುವುದಿಲ್ಲ. ಹದಿನೈದು ದಿನಗಳ ಹಿಂದೆ ಬಿಜೆಪಿ ಸುಮಾರು 180 ಸ್ಥಾನಗಳನ್ನು ಗೆಲ್ಲಬಹುದು ಎಂದು ನಾನು ಭಾವಿಸಿದ್ದೆ. ಆದರೆ ಈಗ 150 ಸ್ಥಾನಗಳನ್ನು ಪಡೆಯಬಹುದು ಎಂದು ನನಗನ್ನಿಸುತ್ತದೆ’ ಎಂದರು.

‘ಚುನಾವಣೆಗೆ ಸಂಬಂಧಿಸಿದಂತೆ ಪ್ರತಿ ರಾಜ್ಯಗಳಿಂದ ವರದಿ ಪಡೆಯುತ್ತಿದ್ದು, ನಾವು ಸುಧಾರಿಸಿದ್ದೇವೆ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶದಲ್ಲಿ ನಮ್ಮ ಮೈತ್ರಿ ಸದೃಡವಾಗಿದ್ದು, ನಾವು ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ’ ಎಂದು ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದರು.

ಲೋಕಸಭೆ ಚುನಾವಣೆಗೆ ಅಮೇಥಿ ಅಥವಾ ರಾಯಬರೇಲಿಯಿಂದ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ, ‘ಇದು ಬಿಜೆಪಿಯ ಪ್ರಶ್ನೆ. ಆದರೂ ಇದಕ್ಕೆ ನಾನು ಉತ್ತರಿಸುತ್ತೇನೆ. ನಮ್ಮ ಪಕ್ಷದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಬಗ್ಗೆ ಸಿಇಸಿ ನಿರ್ಧಾರವೇ ಅಂತಿಮವಾಗಿದೆ’ ಎಂದರು.

ಈ ವೇಳೆ ಮಾತನಾಡಿದ ಅಖಿಲೇಶ್‌ ಯಾದವ್, ಲೋಕಸಭಾ ಚುನಾವಣೆಯಲ್ಲಿ ಪಿಡಿಎ(ಹಿಂದುಳಿದ ವರ್ಗದವರು, ದಲಿತರು ಮತ್ತು ಅಲ್ಪಸಂಖ್ಯಾತರು) ಎನ್‌ಡಿಎಯನ್ನು ಸೋಲಿಸಲಿದೆ. 2014ರಲ್ಲಿ ಅಧಿಕಾರಕ್ಕೆ ಬಂದವರು 2024ರಲ್ಲಿ ಮನೆಗೆ ಹೋಗುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.