ADVERTISEMENT

ಏರ್‌ ಇಂಡಿಯಾ ಮಾರಾಟ ದೇಶದ್ರೋಹದ ಕೆಲಸ: ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ

ಕೋರ್ಟ್‌ನಲ್ಲಿ ಪ್ರಶ್ನಿಸಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಸಭೆ ಸದಸ್ಯ ಎಚ್ಚರಿಕೆ

ಏಜೆನ್ಸೀಸ್
Published 27 ಜನವರಿ 2020, 6:54 IST
Last Updated 27 ಜನವರಿ 2020, 6:54 IST
ಸುಬ್ರಮಣಿಯನ್ ಸ್ವಾಮಿ (ಸಂಗ್ರಹ ಚಿತ್ರ)
ಸುಬ್ರಮಣಿಯನ್ ಸ್ವಾಮಿ (ಸಂಗ್ರಹ ಚಿತ್ರ)   

ನವದೆಹಲಿ:ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾದ (ಎಐ) ಶೇ 100ರಷ್ಟು ಪಾಲು ಮಾರಾಟ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿರುವುದಕ್ಕೆ ಬಿಜೆಪಿ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೊಂದು ದೇಶದ್ರೋಹದ ಕೆಲಸ ಎಂದು ಅವರು ಟೀಕಿಸಿದ್ದಾರೆ.

‘ಏರ್‌ ಇಂಡಿಯಾ ಹೂಡಿಕೆ ಹಿಂಪಡೆತ ಪ್ರಕ್ರಿಯೆ ಇಂದು ಆರಂಭಗೊಂಡಿದೆ. ಈ ಒಪ್ಪಂದ ಸಂಪೂರ್ಣವಾಗಿ ದೇಶದ್ರೋಹದ್ದು. ಇದರ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ’ ಎಂದುಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.

‘ಕಳೆದ ಏಪ್ರಿಲ್–ಡಿಸೆಂಬರ್ ಅವಧಿಯಲ್ಲಿ ನಷ್ಟದ ಪ್ರಮಾಣ ಕಡಿಮೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರೇ, ಏರ್‌ ಇಂಡಿಯಾವನ್ನು ಬಲಪಡಿಸುವುದನ್ನು ಬಿಟ್ಟು ಸರ್ಕಾರ ಇನ್ನೂ ಯಾಕೆ ಮಾರಾಟ ಮಾಡಬೇಕೆಂದೇ ಬಯಸುತ್ತಿದೆ’ ಎಂದು ಅವರು ಪ್ರಶ್ನಿಸಿದ್ದಾರೆ.

ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ಕೂಡ ವಿರೋಧ ಸೂಚಿಸಿದೆ.

‘ಸರ್ಕಾರಗಳ ಬಳಿ ಹಣವಿಲ್ಲದಾದಾಗ ಅವರು ಈ ರೀತಿ ಮಾಡುತ್ತಾರೆ. ಕೇಂದ್ರ ಸರ್ಕಾರದ ಬಳಿ ಹಣವಿಲ್ಲ, ಆರ್ಥಿಕ ಬೆಳವಣಿಗೆ ಶೇ 5ಕ್ಕಿಂತಲೂ ಕಡಿಮೆ ಇದೆ. ನರೇಗಾ ಯೋಜನೆಗೆ ನೀಡಬೇಕಿರುವ ಲಕ್ಷಾಂತರ ರೂಪಾಯಿ ಬಾಕಿ ಇವೆ. ಹೀಗಾಗಿ ಸರ್ಕಾರದ ಬಳಿ ಇರುವ ಅಮೂಲ್ಯ ಆಸ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ’ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.