ಅಖಿಲೇಶ್ ಯಾದವ್
ಲಖನೌ: ಪ್ರಯಾಣದ ಅಡಚಣೆಗಳು ಮತ್ತು ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಮಹಾಕುಂಭಮೇಳದ ಸಮಯದಲ್ಲಿ ಉತ್ತರ ಪ್ರದೇಶಕ್ಕೆ ಬರುವ ವಾಹನಗಳಿಗೆ ಟೋಲ್ ಶುಲ್ಕ ವಿಧಿಸದಂತೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ.
ಭಕ್ತರ ದಟ್ಟಣೆಯಿಂದಾಗಿ, ಪ್ರಯಾಗ್ರಾಜ್ಗೆ ಹೋಗುವ ರಸ್ತೆಗಳಲ್ಲಿ ದೀರ್ಘಕಾಲ ಸಂಚಾರ ದಟ್ಟಣೆ ಉಂಟಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಮಹಾಕುಂಭಮೇಳದ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ವಾಹನಗಳನ್ನು ಟೋಲ್ ಮುಕ್ತಗೊಳಿಸಬೇಕು. ಇದರಿಂದಾಗಿ ಪ್ರಯಾಣ ಅಡೆತಡೆಗಳು ಮತ್ತು ಸಂಚಾರ ದಟ್ಟಣೆಯ ಸಮಸ್ಯೆ ಕಡಿಮೆಯಾಗುತ್ತದೆ. ಚಲನಚಿತ್ರಗಳನ್ನು ಮನರಂಜನಾ ತೆರಿಗೆಯಿಂದ ಮುಕ್ತಗೊಳಿಸಬಹುದಾದರೆ, ಮಹಾಕುಂಭಮೇಳದ ಅದ್ದೂರಿ ಉತ್ಸವದಂದು ವಾಹನಗಳನ್ನು ಟೋಲ್ ಮುಕ್ತಗೊಳಿಸಬಾರದೇಕೆ?’ ಎಂದು ಪ್ರಶ್ನಿಸಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಜನವರಿ 13ರಿಂದ ಮಹಾಕುಂಭಮೇಳ ಪ್ರಾರಂಭಗೊಂಡಿದ್ದು, ಫೆಬ್ರುವರಿ 26ರವರೆಗೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.