ADVERTISEMENT

ಅಕ್ರಮ ಆಸ್ತಿ: ಮುಲಾಯಂ ವಿರುದ್ಧ ಪ್ರಕರಣ ಕೈಬಿಟ್ಟ ಸಿಬಿಐ

ಸಾಕ್ಷ್ಯಾಧಾರಗಳ ಕೊರತೆ: ‘ಸುಪ್ರಿಂ’ಗೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 21 ಮೇ 2019, 17:34 IST
Last Updated 21 ಮೇ 2019, 17:34 IST
ಮುಲಾಯಂ ಸಿಂಗ್
ಮುಲಾಯಂ ಸಿಂಗ್   

ನವದೆಹಲಿ: ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್‌ ಯಾದವ್‌ ಮತ್ತು ಅವರ ಪುತ್ರ ಹಾಗೂ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಮತ್ತು ಇನ್ನೊಬ್ಬ ಪುತ್ರ ಪ್ರತೀಕ್‌ ಯಾದವ್‌ ವಿರುದ್ಧದ ತನಿಖೆಯನ್ನು ಮುಕ್ತಾಯಗೊಳಿಸಲಾಗಿದೆ ಎಂದು ಸಿಬಿಐ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಸಾಕ್ಷ್ಯಾಧಾರಗಳ ಕೊರತೆಯಿಂದ ಈ ಕ್ರಮಕೈಗೊಳ್ಳಲಾಗಿದೆ. ಪಾರದರ್ಶಕವಾಗಿ, ನಿಷ್ಪಕ್ಷಪಾತವಾಗಿ ಮತ್ತು ವೃತ್ತಿಪರವಾಗಿ ತನಿಖೆ ಕೈಗೊಳ್ಳಲಾಗಿತ್ತು. 2013ರ ಆಗಸ್ಟ್‌ 7ರಂದೇ ತನಿಖೆ ಮುಕ್ತಾಯಗೊಳಿಸುವ ನಿರ್ಧಾರವನ್ನು ಸ್ವತಂತ್ರವಾಗಿ ಕೈಗೊಳ್ಳಲಾಗಿದೆ ಎಂದು ಸಿಬಿಐ ತಿಳಿಸಿದೆ.

ದಾಖಲೆಗಳು ಮತ್ತು ಸಾಕ್ಷ್ಯಗಳ ಹೇಳಿಕೆಗಳನ್ನು ಜವಾಬ್ದಾರಿಯಿಂದ ಪರಿಶೀಲಿಸಲಾಗಿದೆ. ಮುಲಾಯಂ ಸಿಂಗ್‌ ಯಾದವ್‌ ಕುಟುಂಬದ ಸದಸ್ಯರ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳಿರಲಿಲ್ಲ ಎಂದು ಸಿಬಿಐ ತಿಳಿಸಿದೆ.

ADVERTISEMENT

ತನಿಖೆಯ ಬಗ್ಗೆ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿದ್ದರಿಂದ ಸಿಬಿಐ ಈ ಮಾಹಿತಿ ನೀಡಿದೆ. ವಿಶ್ವನಾಥ ಚತುರ್ವೇದಿ ಎನ್ನುವವರು ಈ ಪ್ರಕರಣದ ಸ್ಥಿತಿ ಬಗ್ಗೆ ವಿವರ ಬಹಿರಂಗಪಡಿಸುವಂತೆ ಅರ್ಜಿ ಸಲ್ಲಿಸಿದ್ದರಿಂದ ನ್ಯಾಯಾಲಯ ಮಾರ್ಚ್‌ 25ರಂದು ಆದೇಶ ನೀಡಿತ್ತು.

ಈ ಪ್ರಕರಣವನ್ನು ಮುಕ್ತಾಯಗೊಳಿಸಿರುವ ಕುರಿತು 2013ರ ಅಕ್ಟೋಬರ್‌ 8ರಂದು ಕೇಂದ್ರೀಯ ಜಾಗೃತ ಆಯೋಗಕ್ಕೆ ವರದಿ ಸಲ್ಲಿಸಲಾಗಿತ್ತು. ಇದು ಕ್ರಿಮಿನಲ್‌ ತನಿಖೆಯಾಗಿರದ ಕಾರಣ ನ್ಯಾಯಾಲಯಕ್ಕೆ ವರದಿ ಸಲ್ಲಿಸಿರಲಿಲ್ಲ ಎಂದು ಸಿಬಿಐ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.