ADVERTISEMENT

ಬಿಜೆಪಿಯ ಇನ್ನಷ್ಟು ಶಾಸಕರ ಸೇರ್ಪಡೆ ಇಲ್ಲ: ಅಖಿಲೇಶ್‌ ಯಾದವ್‌

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 18:59 IST
Last Updated 15 ಜನವರಿ 2022, 18:59 IST
ಅಖಿಲೇಶ್‌ ಯಾದವ್‌
ಅಖಿಲೇಶ್‌ ಯಾದವ್‌   

ಲಖನೌ: ಬಿಜೆಪಿ ಅಥವಾ ಬೇರೆ ಪಕ್ಷಗಳಿಂದ ಹೊರಬರಲಿರುವ ಯಾರನ್ನೂ ಸಮಾಜವಾದಿ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರು ಶನಿವಾರ ಹೇಳಿದರು. ಹೊರಗಿನವರಿಗೆ ತಮ್ಮ ಪಕ್ಷದಲ್ಲಿ ಜಾಗ ನೀಡಲು ಇನ್ನುಮುಂದೆ ಆಗುವುದಿಲ್ಲ ಎಂದು ಅವರು ಹೇಳಿದರು.

ಉತ್ತರ ಪ್ರದೇಶದ ಸಚಿವರೊಬ್ಬರು ಬಿಜೆಪಿ ತೊರೆದು ಎಸ್‌ಪಿ ಸೇರಲು ಸಿದ್ಧರಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದ ಕಾರಣ ಅವರು ಈ ಹೇಳಿಕೆ ನೀಡಿದ್ದಾರೆ.

‘ಬಿಜೆಪಿಯ ಹಲವಾರು ಶಾಸಕರು ನಮ್ಮ ಜೊತೆ ಸಂಪರ್ಕದಲ್ಲಿ ಇದ್ದಾರೆ. ಅವರಲ್ಲಿ ಒಬ್ಬರು ಸಚಿವರು ಕೂಡಾ ಇದ್ದಾರೆ. ಅವರು ನಮ್ಮ ಪಕ್ಷದ ಟಿಕೆಟ್‌ ಆಕಾಂಕ್ಷಿ ಆಗಿದ್ದಾರೆ. ಆದರೆ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ಸ್ಥಿತಿಯಲ್ಲಿ ನಾವು ಇಲ್ಲ’ ಎಂದು ಎಸ್‌ಪಿಯ ಹಿರಿಯ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವುದರಿಂದ ನಮ್ಮ ಪಕ್ಷದ ಮುಖಂಡರಿಗೆ ಟಿಕೆಟ್‌ ಹಂಚಲು ತೊಂದರೆ ಆಗುತ್ತದೆ. ಪಕ್ಷನಿಷ್ಠ ಮುಖಂಡರನ್ನು ನಾವು ಕಡೆಗಣಿಸುವಂತಿಲ್ಲ’ ಎಂದು ಅವರು ಹೇಳಿದರು.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸಂಪುಟದಲ್ಲಿ ಸಚಿವರಾಗಿದ್ದ, ಹಿಂದುಳಿದ ವರ್ಗಗಳ ಪ್ರಭಾವಿ ನಾಯಕ ಸ್ವಾಮಿ ಪ್ರಸಾದ್‌ ಮೌರ್ಯ ಅವರು ಮತ್ತೊಬ್ಬ ಸಚಿವ ಮತ್ತು ಆರು ಶಾಸಕರ ಜೊತೆ ಎಸ್‌ಪಿಗೆ ಶುಕ್ರವಾರ ಸೇರಿದರು. ಅವರೆಲ್ಲರೂ ಎಸ್‌ಪಿ ಟಿಕೆಟ್‌ನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.ಮತ್ತೊಬ್ಬ ಸಚಿವ ದಾರಾ ಸಿಂಗ್‌ ಚೌಹಾನ್‌ ಇತ್ತೀಚೆಗಷ್ಟೇ ಯೋಗಿ ಆದಿತ್ಯನಾಥ ಅವರ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಕೂಡಾ ಎಸ್‌ಪಿಯಿಂದ ಸ್ಪರ್ಧಿಸಬಹುದು ಎನ್ನಲಾಗಿದೆ.

ಬಿಜೆಪಿ ಮುಖಂಡರು ದೊಡ್ಡ ಪ್ರಮಾಣದಲ್ಲಿ ಎಸ್‌ಪಿ ಸೇರಿದ್ದರಿಂದ ಮತ್ತು ಎಸ್‌ಪಿ ಟಿಕೆಟ್‌ನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿರುವುದರಿಂದ ಎಸ್‌ಪಿ ಮುಖಂಡರಲ್ಲಿ ಅಸಮಾಧಾನ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.

ಎಸ್‌ಪಿ ಶಾಸಕರು ಇರುವ ಕ್ಷೇತ್ರಗಳಿಂದಲೂ ಸ್ಪರ್ಧಿಸುವ ಅವಕಾಸ ನೀಡುವಂತೆ ಬಿಜೆಪಿಯಿಂದ ಹೊರಬಂದಿರುವ ಮುಖಂಡರಲ್ಲಿ ಕೆಲವರು ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.