ಶ್ರೀನಗರ: ಉತ್ತರ ಕಾಶ್ಮೀರದ ಬಂಡಿಪೋರಾದಲ್ಲಿ ಸ್ಥಳೀಯ ಬಿಜೆಪಿ ನಾಯಕ ವಾಸಿಂ ಬಾರಿ ಮತ್ತು ಆತನ ಕುಟುಂಬ ಸದಸ್ಯರ ಹತ್ಯೆಯಲ್ಲಿ ಲಷ್ಕರ್ ಎ ತಯಬಾ (ಎಲ್ಇಟಿ) ಕೈವಾಡವಿದೆ ಎಂದು ಪೊಲೀಸರು ಗುರುವಾರ ಹೇಳಿದ್ದಾರೆ.
ಬಿಜೆಪಿ ನಾಯಕನ ಭದ್ರತೆಗಾಗಿ ನೇಮಿಸಿದ್ದ ಎಲ್ಲಾ 10 ಮಂದಿ ಭದ್ರತಾ ಅಧಿಕಾರಿಗಳನ್ನು ವಜಾ ಮಾಡಲಾಗಿದೆ. ಈ 10 ಮಂದಿಯನ್ನು ಬಂಧಿಸಲಾಗಿದ್ದು ಹತ್ಯೆ ಪ್ರಕರಣದ ಬಗ್ಗೆ ವಿಚಾರಣೆ ನಡೆಸಲಾಗಿದೆ.
ಪೊಲೀಸ್ಠಾಣೆ ಸಮೀಪವೇ ಇರುವ ಅಂಗಡಿಯಲ್ಲಿ ವಾಸಿಂ ಬಾರಿ, ಅವರ ತಂದೆ ಬಹಿರ್ ಅಹ್ಮದ್ ಬಾರಿ ಮತ್ತು ಸೋದರ ಉಮರ್ ಬಾರಿ ಅವರು ಇದ್ದಾಗ ಬುಧವಾರ ರಾತ್ರಿ 8.45ರ ವೇಳೆಗೆ ಕೊಲೆಯಾಗಿದ್ದಾರೆ.
ಬಾರಿ ಅವರ ಕುಟುಂಬದವರ ಮೇಲೆ ಎಲ್ಎಟಿಯ ಇಬ್ಬರು ಉಗ್ರರು ದಾಳಿ ಮಾಡಿದ್ದಾರೆ. ಇದು ಪೂರ್ವಯೋಜಿತ. ವಾಸಿಂ ಅವರು ಭದ್ರತಾ ಅಧಿಕಾರಿಗಳ ಜತೆ ತಮ್ಮ ವಾರ್ಡ್ಗೆ ಭೇಟಿ ನೀಡಿ ಮನೆಗೆ ಹಿಂತಿರುಗಿದ್ದರು. ಆ ಬಳಿಕ ಈ ಅಧಿಕಾರಿಗಳು ತಮ್ಮ ಕೊಠಡಿಗಳಿಗೆ ತೆರಳಿದ್ದು ವಾಸಿ ಅವರು ತಂದೆ ಮತ್ತು ಸೋದರ ಇದ್ದ ಅಂಗಡಿ ಬಳಿ ಹೋಗಿದ್ದರು. ಆಗ ದಾಳಿ ನಡೆದಿದೆ ಎಂದು ಐಜಿಪಿ ವಿಜಯ್ಕುಮಾರ್, ವರದಿಗಾರರಿಗೆ ವಿವರಣೆ ನೀಡಿದ್ದಾರೆ.
ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪ್ರಕಾರ ಎಲ್ಇಟಿಯ ಇಬ್ಬರು ಉಗ್ರರು ದಾಳಿ ನಡೆಸಿದ್ದಾರೆ. ಒಬ್ಬನನ್ನು ಸ್ಥಳೀಯ ನಿವಾಸಿ ಅಬಿದ್ ಎಂದು ಮತ್ತೊಬ್ಬ ಹೊರಗಿನಿಂದ ಬಂದಿರುವಾತ ಎಂದು ಗುರುತಿಸಲಾಗಿದೆ. ಅಬಿದ್ ಪಿಸ್ತೂಲಿನಿಂದ ಗುಂಡು ಹಾರಿಸಿದ್ದರೆ, ಇನ್ನೊಬ್ಬಾತ ಆತನಿಗೆ ಸೂಚನೆ ನೀಡುತ್ತಿದ್ದ. ಈ ಇಬ್ಬರನ್ನೂ ಶೀಘ್ರ ಪತ್ತೆಹಚ್ಚಲಾಗುವುದು ಎಂದು ಅವರು ಹೇಳಿದ್ದಾರೆ.
ವಾಸಿಂ ಬಾರಿ ಅವರು 2014ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತಿದ್ದರು. ಬಳಿಜ ಬಿಜೆಪಿ ಸೇರಿದ್ದು ಜಿಲ್ಲೆಯಲ್ಲಿ ಪಕ್ಷದ ಪ್ರಮುಖ ನಾಯಕನಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.