ADVERTISEMENT

ಗಲಭೆ ಆರೋಪಿಗಳ ಚಿತ್ರವಿರುವ ಬ್ಯಾನರ್ ಸಲ್ಲದು: ಅಲಹಾಬಾದ್ ಹೈಕೋರ್ಟ್ ಆದೇಶ

ಏಜೆನ್ಸೀಸ್
Published 8 ಮಾರ್ಚ್ 2020, 6:43 IST
Last Updated 8 ಮಾರ್ಚ್ 2020, 6:43 IST
   

ಅಲಹಾಬಾದ್: ಲಖನೌನಲ್ಲಿ ನಡೆದ ಪೌರತ್ವ ಕಾಯ್ದೆ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಗಳ ಚಿತ್ರ ಮತ್ತು ವಿವರ ಪ್ರಕಟಿಸುವ ಉತ್ತರ ಪ್ರದೇಶ ಅಧಿಕಾರಿಗಳಿಗೆ ಅಲಹಾಬಾದ್ ಹೈಕೋರ್ಟ್‌ ಚಾಟಿ ಬೀಸಿದೆ.

ಈ ಸಂಬಂಧ ಭಾನುವಾರ ಬೆಳಿಗ್ಗೆ 10 ಗಂಟೆಗೆ ವಿಶೇಷ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥುರ್, ನ್ಯಾಯಮೂರ್ತಿ ರಮೇಶ್ ಸಿನ್ಹಾ ಅವರಿದ್ದ ನ್ಯಾಯಪೀಠವು, ‘ಪ್ರತಿಭಟನಾಕಾರರ ಚಿತ್ರ ಮತ್ತು ವಿವರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದು ಅತಿರೇಕದ ಪರಮಾವಧಿ. ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದ ಕ್ರಮ’ ಎಂದು ಕಟುಮಾತುಗಳಿಂದ ಟೀಕಿಸಿತು.

ಡಿಸೆಂಬರ್ 19, 2019ರಂದು ಲಖನೌ ನಗರದಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾದ 60 ಮಂದಿಯ ಭಾವಚಿತ್ರ ಮತ್ತು ವಿವರಗಳನ್ನು ಲಖನೌ ನಗರಾಡಳಿತ ಪ್ರಮುಖ ವೃತ್ತಗಳಲ್ಲಿ ಪ್ರದರ್ಶಿಸಿತ್ತು. ಸಾರ್ವಜನಿಕ ಆಸ್ತಿಯನ್ನು ಹಾಳುಮಾಡಿದ ಆರೋಪವನ್ನು ಅವರ ಮೇಲೆ ಹೊರಿಸಲಾಗಿತ್ತು.

ADVERTISEMENT

ಈ ಪೋಸ್ಟರ್‌ಗಳನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೂಚನೆ ಮೇರೆಗೆ ಲಖನೌದ ಹಫ್ತಾರ್‌ಜಂಗ್, ವಿಧಾನಸಭೆಯ ಎದುರು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗಿತ್ತು ಎಂದು ಸರ್ಕಾರದ ವಕ್ತಾರರು ಹೇಳಿದ್ದರು.

ಬ್ಯಾನರ್‌ ಒಂದರಲ್ಲಿ ಚಳಿವಳಿಗಾರ ಸದಾಫ್ ಜಾಫರ್, ಮಾನವಹಕ್ಕು ಹೋರಾಟಗಾರ ಮತ್ತು ವಕೀಲ ಮೊಹಮದ್ ಶೋಯೆಬ್, ಮಾಜಿ ಐಪಿಎಸ್ ಅಧಿಕಾರಿ ಎಸ್.ಆರ್.ದಾರಾಪುರಿ ಇತರರ ಚಿತ್ರ ಮತ್ತು ವಿವರಗಳೂ ಕಾಣಿಸಿಕೊಂಡಿದ್ದವು.

ಆರೋಪಿಗಳ ವಿವರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದ ವಿಭಾಗೀಯ ನ್ಯಾಯಪೀಠವು ಸ್ವಪ್ರೇರಣೆಯಿಂದ ಭಾನುವಾರ ಬೆಳಿಗ್ಗೆ 10 ಗಂಟೆಗೆ ವಿಶೇಷ ವಿಚಾರಣೆ ನಡೆಸಿತು.

‘ಮಧ್ಯಾಹ್ನ 3 ಗಂಟೆಯ ಒಳಗೆ ಸರ್ಕಾರವು ಇಂಥ ಬ್ಯಾನರ್‌ಗಳನ್ನು ತೆರವುಗೊಳಿಸಿ, ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು’ ಎಂದು ಆದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.