ನವದೆಹಲಿ: ಪೊಲೀಸ್ ಕಸ್ಟಡಿಯಲ್ಲಿರುವ ‘ಆಲ್ಟ್ ನ್ಯೂಸ್’ ಸಹ ಸಂಸ್ಥಾಪಕ, ಪತ್ರಕರ್ತ ಮಹಮ್ಮದ್ಜುಬೈರ್ ಅವರು ತಮ್ಮನ್ನು ನಾಲ್ಕು ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿರುವ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಗುರುವಾರ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಅರ್ಜಿ ಶುಕ್ರವಾರ ವಿಚಾರಣೆಗೆ ಬರಲಿದೆ.
ಹಿಂದೂ ದೇವರ ವಿರುದ್ಧ 2018ರಲ್ಲಿ ಆಕ್ಷೇಪಾರ್ಹ ಟ್ವೀಟ್ ಮಾಡಿ, ಧಾರ್ಮಿಕ ಭಾವನೆಗಳಿಗೆ ಚ್ಯುತಿ ತಂದ ಆರೋಪದ ಪ್ರಕರಣದಲ್ಲಿದೆಹಲಿ ವಿಶೇಷ ಘಟಕದ ಪೊಲೀಸರುಜುಬೈರ್ ಅವರನ್ನುಜೂನ್ 27ರಂದು ಬಂಧಿಸಿದ್ದರು. ಆರೋಪಿ ಪತ್ರಕರ್ತನನ್ನು ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ಸಲ್ಲಿಸಿದ ಅರ್ಜಿ ಮಾನ್ಯ ಮಾಡಿದ ಚೀಫ್ ಮೆಟ್ರೊಪಾಲಿಟನ್ ನ್ಯಾಯಾಲಯದ ನ್ಯಾಯಾಧೀಶರಾದ ಸ್ನಿಗ್ಧಾ ಸರ್ವಾರಿ ಅವರು ಜೂನ್ 28ರಂದು, ಪೊಲೀಸ್ ಕಸ್ಟಡಿಯನ್ನು ನಾಲ್ಕು ದಿನಗಳವರೆಗೆ ವಿಸ್ತರಿಸಿ ಆದೇಶ ಹೊರಡಿಸಿತ್ತು.
ಚೀಫ್ ಮೆಟ್ರೊಪಾಲಿಟನ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಜುಬೈರ್ ಅವರ ಪರ ವಕೀಲರಾದ ವೃಂದಾ ಗ್ರೋವರ್ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದರು. ನ್ಯಾಯಮೂರ್ತಿ ಸಂಜೀವ್ನರುಲಾ ಅವರು ಈ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಲು ಸಮ್ಮತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.