ನವದೆಹಲಿ: ಹಿಂದೂ ದೇವರ ಕುರಿತು 2018ರಲ್ಲಿ ಮಾಡಿದ್ದ ಆಕ್ಷೇಪಾರ್ಹ ಟ್ವೀಟ್ ಪ್ರಕರಣದಲ್ಲಿ ಬಂಧಿತರಾಗಿರುವ ‘ಆಲ್ಟ್ ನ್ಯೂಸ್’ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ಅವರ ಜಾಮೀನು ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸಮ್ಮತಿಸಿದೆ.
ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆ.ಕೆ. ಮಹೇಶ್ವರಿ ಅವರಿದ್ದ ರಜೆಕಾಲದ ಪೀಠವು, ಮುಖ್ಯ ನ್ಯಾಯಮೂರ್ತಿಗಳ ಅನುಮೋದನೆಗೆ ಒಳಪಟ್ಟು ಈ ಪ್ರಕರಣವನ್ನು ಶುಕ್ರವಾರದ ವಿಚಾರಣೆ ಪಟ್ಟಿಗೆ ಸೇರಿಸಲಾಗಿದೆ ಎಂದು ಗುರುವಾರ ಹೇಳಿದೆ.
ಜುಬೈರ್ ಪರ ಹಾಜರಾಗಿದ್ದ ಹಿರಿಯ ವಕೀಲಕಾಲಿನ್ ಗೊನ್ಸಾಲ್ವಿಸ್, ಜುಬೈರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದ್ದು, ಸದ್ಯ ಅವರು ಬಂಧನಲ್ಲಿದ್ದಾರೆ. ಜುಬೈರ್ಗೆ ಪ್ರಾಣ ಬೆದರಿಕೆ ಇದ್ದು, ಆದಷ್ಟು ತುರ್ತು ಈ ಅರ್ಜಿಯ ವಿಚಾರಣೆ ನಡೆಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಜುಬೈರ್ ವಿರುದ್ಧ ಹಿಂದೂ ಶೇರ್ ಸೇನಾದ ಸಿತಾಪುರ ಜಿಲ್ಲಾಧ್ಯಕ್ಷ ಭಗವಾನ್ ಶರಣ್ ದೂರು ನೀಡಿದ್ದು, ಉತ್ತರಪ್ರದೇಶದಲ್ಲಿ ಪ್ರಕರಣ ದಾಖಲಾಗಿತ್ತು. ಜೂನ್ 27ರಂದು ದೆಹಲಿ ಪೊಲೀಸರು ಜುಬೈರ್ ಅವರನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.