ADVERTISEMENT

ಅಲ್ವಾರ್‌ನಲ್ಲಿ ಗುಂಪು ಹಲ್ಲೆ ಪ್ರಕರಣ: ನಾಲ್ವರಿಗೆ ಏಳು ವರ್ಷ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 25 ಮೇ 2023, 14:06 IST
Last Updated 25 ಮೇ 2023, 14:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜೈಪುರ: ರಾಜಸ್ಥಾನದ ಅಲ್ವಾರ್‌ನಲ್ಲಿ ಗೋವು ಕಳ್ಳಸಾಗಣೆದಾರನೆಂದು ಶಂಕಿಸಿ ರಕ್ಬರ್‌ ಖಾನ್‌ ಎಂಬುವವರ ಮೇಲೆ ಗುಂಪು ಹಲ್ಲೆ ನಡೆಸಿ ಕೊಲೆ ಮಾಡಿದ್ದ ಆರೋಪಿಗಳ ಪೈಕಿ ನಾಲ್ವರಿಗೆ ಇಲ್ಲಿನ ನ್ಯಾಯಾಲಯ ಗುರುವಾರ ಏಳು ವರ್ಷ ಶಿಕ್ಷೆಯನ್ನು ವಿಧಿಸಿದೆ.

ಐದನೇ ಆರೋಪಿ ನವಲ್‌ ಕಿಶೋರ್‌ ಎಂಬುವವರನ್ನು ಸೂಕ್ತ ಸಾಕ್ಷ್ಯಧಾರಗಳ ಕೊರತೆಯಿಂದ ಖುಲಾಸೆಗೊಳಿಸಿದೆ.

ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯ–1ರಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ಪರಮ್‌ಜಿತ್‌ ಸಿಂಗ್‌, ಧರ್ಮೇಂದ್ರ ಯಾದವ್‌, ನರೇಶ್‌ ಶರ್ಮಾ ಮತ್ತು ವಿಜಯ್‌ ಕುಮಾರ್‌ ಅವರನ್ನು ನ್ಯಾಯಾಧೀಶರು ಅಪರಾಧಿಗಳೆಂದು ಪರಿಗಣಿಸಿ, ಶಿಕ್ಷೆ ವಿಧಿಸಿದರು ಎಂದು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅಶೋಕ್‌ ಶರ್ಮಾ ತಿ‌ಳಿಸಿದರು.

ADVERTISEMENT

2018ರ ಜುಲೈ 20ರಂದು ಅಲ್ವಾರ್ ಜಿಲ್ಲೆಯ ರಾಮಗಢ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶದಲ್ಲಿ ಗೋವುಗಳನ್ನು ಕಳ್ಳಸಾಗಣೆ ಮಾಡಿದ್ದಾರೆಂದು ಶಂಕಿಸಿ ರಕ್ಬರ್ ಖಾನ್ ಮತ್ತು ಅವರ ಸ್ನೇಹಿತ ಅಸ್ಲಾಂ ಅವರನ್ನು ಗುಂಪೊಂದು ತೀವ್ರವಾಗಿ ಥಳಿಸಿತ್ತು. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ ಪೊಲೀಸರು, 2019ರಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 

ಲಾಡ್‌ಪುರ ಗ್ರಾಮದಿಂದ ಗೋವುಗಳನ್ನು ಖರೀದಿಸಿ ಅವುಗಳನ್ನು ಹರಿಯಾಣದಲ್ಲಿನ ತಮ್ಮ ಊರಿಗೆ ರಕ್ಬರ್ ಖಾನ್ ಮತ್ತು ಅವರ ಸ್ನೇಹಿತ ಅಸ್ಲಾಂ ಕೊಂಡೊಯ್ಯುತ್ತಿದ್ದರು. ಲಲಾವಂಡಿ ಗ್ರಾಮ ಸಮೀಪದ ಅರಣ್ಯ ಪ್ರದೇಶದ ಮೂಲಕ ಗೋವುಗಳನ್ನು ಸಾಗಿಸುತ್ತಿದ್ದಾಗ ಅಡ್ಡಗಟ್ಟಿದ್ದ ಗುಂಪು ಹಲ್ಲೆ ನಡೆಸಿತ್ತು. ಅಸ್ಲಾಂ ತಪ್ಪಿಸಿಕೊಂಡಿದ್ದರು. ಆದರೆ, ಗುಂಪು ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ರಕ್ಬರ್‌ ಖಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.