ಗುರುಗ್ರಾಮ: ಹರಿಯಾಣದ ಗುರುಗ್ರಾಮದಲ್ಲಿ ಗುರುವಾರ ಭಾರೀ ಮಳೆ ಸುರಿದಿದ್ದು, ಶುಕ್ರವಾರವೂ ಅಧಿಕ ಮಳೆಯಾಗುವ ಮುನ್ಸೂಚನೆ ಇದೆ. ಈ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು, ತಮ್ಮ ಉದ್ಯೋಗಿಗಳಿಗೆ ಮನೆಯಲ್ಲೇ ಕೆಲಸ ಮಾಡಲು ಸೂಚನೆ ನೀಡುವಂತೆ ಖಾಸಗಿ ಸಂಸ್ಥೆಗಳು ಮತ್ತು ಕಾರ್ಪೊರೇಟ್ ಕಚೇರಿಗಳಿಗೆ ಸಲಹೆ ನೀಡಿದೆ.
ಅಲ್ಲದೆ, ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶುಕ್ರವಾರ ಶಾಲಾ, ಕಾಲೇಜುಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ.
‘ಇದು ಪಾಲಿಕೆ ಸಿಬ್ಬಂದಿಗೆ ಬಹು ಬೇಗ ನೀರನ್ನು ತೆರವುಗೊಳಿಸಲು ಮತ್ತು ದುರಸ್ತಿ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಲು ಸಾಧ್ಯವಾಗುತ್ತದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗುರುವಾರ, ಗುರುಗ್ರಾಮಮತ್ತು ಮಾನೇಸರ್ನಲ್ಲಿ ಸುಮಾರು 105 ಮಿಮೀ ಮಳೆ ದಾಖಲಾಗಿದೆ, ಇದರಿಂದ ದೆಹಲಿ-ಜೈಪುರ ಎಕ್ಸ್ಪ್ರೆಸ್ವೇ ಜಲಾವೃತವಾಗಿತ್ತು.
ನರಸಿಂಗ್ಪುರ ಚೌಕ್ ಬಳಿಯ ಎಕ್ಸ್ಪ್ರೆಸ್ವೇನಲ್ಲಿ ಪ್ರಯಾಣಿಕರು ಭಾರಿ ಟ್ರಾಫಿಕ್ ದಟ್ಟಣೆಯನ್ನು ಎದುರಿಸಿದರು. ಮತ್ತೆ ಕೆಲವರು ಮೊಣಕಾಲುವರೆಗಿನನೀರಿನಲ್ಲೇ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ.
ನರಸಿಂಗ್ಪುರ ಚೌಕ್ ಬಳಿಯ ಎಕ್ಸ್ಪ್ರೆಸ್ವೇ ಮತ್ತು ಸರ್ವಿಸ್ ಲೇನ್ ಜಲಾವೃತಗೊಂಡಿರುವ ಚಿತ್ರಗಳು ಮತ್ತು ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ಗುರುಗ್ರಾಮ ಟ್ರಾಫಿಕ್ ಪೊಲೀಸರು ಟ್ವಿಟರ್ ಮೂಲಕ ಸಂಚಾರ ದಟ್ಟಣೆಯ ಬಗ್ಗೆ ಪ್ರಯಾಣಿಕರಿಗೆ ಅಪ್ಡೇಟ್ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.