ಡೆಹ್ರಾಡೂನ್: ರಾಜ್ಯದ ಗಡಿ ಭಾಗದಲ್ಲಿ ವಾಯುಪಡೆಯ ಕಾರ್ಯಾಚರಣೆಗೆ ಅನುಕೂಲವಾಗುವಂತೆ ವಿವಿಧ ಸೌಲಭ್ಯಗಳ ಅಳವಡಿಕೆಗಾಗಿ ಭೂಮಿ ನೀಡುವಂತೆಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರಿಗೆಸೆಂಟ್ರಲ್ ಏರ್ ಕಮಾಂಡ್ನ ಮುಖ್ಯಸ್ಥ ಏರ್ ಮಾರ್ಷಲ್ ರಾಜೇಶ್ಕುಮಾರ್ ಮನವಿ ಮಾಡಿದರು.
ನೈಜ ನಿಯಂತ್ರಣ ರೇಖೆ (ಎಲ್ಎಸಿ) ಬಳಿ ಚೀನಾದೊಂದಿಗೆ ಕಳೆದ ನಾಲ್ಕು ತಿಂಗಳಿನಿಂದಲೂ ಸಂಘರ್ಷ ನಡೆಯುತ್ತಿರುವ ಸಂದರ್ಭದಲ್ಲಿ ವಾಯುಪಡೆಯ ಈ ನಡೆಗೆ ಮಹತ್ವ ಬಂದಿದೆ. ಚೀನಾ ಮತ್ತು ನೇಪಾಳದೊಂದಿಗೆ ಉತ್ತರಾಖಂಡ ಗಡಿ ಹೊಂದಿಕೊಂಡಿದೆ.
ರಾಜ್ಯದ ಪರ್ವತ ಪ್ರದೇಶಗಳಲ್ಲಿ ರಾಡಾರ್ಗಳನ್ನು ಸ್ಥಾಪಿಸುವುದು, ಯುದ್ಧವಿಮಾನಗಳನ್ನು ಇಳಿಸಲು ಅತ್ಯಾಧುನಿಕ ನಿಲ್ದಾಣ ನಿರ್ಮಾಣಕ್ಕೆ ವಾಯುಪಡೆ ಮುಂದಾಗಿದೆ. ಇದಕ್ಕಾಗಿ ರಾಜ್ಯದ ಚಮೋಲಿ, ಪಿತೋರ್ಗಡ, ಉತ್ತರಕಾಶಿ ಜಿಲ್ಲೆಗಳ ಪರ್ವತ ಪ್ರದೇಶಗಳಲ್ಲಿ ಕೆಲವು ಸ್ಥಳಗಳನ್ನು ಗುರುತಿಸಲಾಗಿದೆ ಎಂದು ವಾಯುಪಡೆ ಮೂಲಗಳು ಹೇಳಿವೆ.
ಪಂತ್ನಗರ, ಜಾಲಿಗ್ರ್ಯಾಂಟ್ ಹಾಗೂ ಪಿತೋರ್ಗಡಗಳಲ್ಲಿರುವ ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವಂತೆಯೂ ಏರ್ ಮಾರ್ಷಲ್ ರಾಜೇಶ್ಕುಮಾರ್ ಮುಖ್ಯಮಂತ್ರಿ ರಾವತ್ ಅವರಿಗೆ ಮನವಿ ಮಾಡಿದರು.
ವಾಯುಪಡೆ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ರಾವತ್, ವಾಯುಪಡೆಗೆ ಸೂಕ್ತವೆನಿಸುವ ಜಮೀನು ಹುಡುಕಿ, ಅದರ ಹಸ್ತಾಂತರಕ್ಕೆ ಕ್ರಮ ಕೈಗೊಳ್ಳುವ ಸಲುವಾಗಿ ನೋಡಲ್ ಅಧಿಕಾರಿ ನೇಮಕಕ್ಕೆ ಆದೇಶಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.