ನವದೆಹಲಿ: ವಲಸೆ ಕಾರ್ಮಿಕರಿಗಾಗಿ ರೈಲ್ವೆ ಇಲಾಖೆ ಆರಂಭಿಸಿದ್ದ 'ಶ್ರಮಿಕ್ ಸ್ಪೆಷಲ್' ರೈಲುಗಳನ್ನು 'ಕೊರೊನಾ ಎಕ್ಸ್ಪ್ರೆಸ್' ಎಂದು ಟೀಕಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿರುಗೇಟು ನೀಡಿದ್ದಾರೆ.
ಬಿಜೆಪಿಯ 'ಜನ ಸಂವಾದ' ವರ್ಚುಯಲ್ರ್ಯಾಲಿಯಲ್ಲಿಪಶ್ಚಿಮ ಬಂಗಾಳದ ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು,'ಮಮತಾ ದೀದಿ ನೀವು ನಾಮಕರಣ ಮಾಡಿದ ಕೊರೊನಾ ಎಕ್ಸ್ಪ್ರೆಸ್ ಹೆಸರು ನಿಮ್ಮ ನಿರ್ಗಮದ ಹಾದಿಯಾಗುತ್ತೆ. ವಲಸೆ ಕಾರ್ಮಿಕರ ಗಾಯದ ಮೇಲೆ ನೀವು ಉಪ್ಪು ಸುರಿದಿರಿ. ಅವರು ಇದನ್ನು ಎಂದಿಗೂ ಮರೆಯುವುದಿಲ್ಲ' ಎಂದು ಅಮಿತ್ ಶಾ ಹೇಳಿದರು.
ವಲಸೆ ಕಾರ್ಮಿಕರಿಗಾಗಿ ರೈಲ್ವೆ ಇಲಾಖೆ ಆರಂಭಿಸಿದ್ದ ಶ್ರಮಿಕ್ ಸ್ಪೆಷಲ್ ರೈಲುಗಳನ್ನು ಮಮತಾ ಬ್ಯಾನರ್ಜಿ ಕೊರೊನಾ ಎಕ್ಸ್ಪ್ರೆಸ್ ಎಂದು ವ್ಯಂಗ್ಯವಾಡಿದ್ದರು.
'ಸುರಕ್ಷಿತ ಅಂತರ ಕಾಪಾಡಿಕೊಳ್ಳಲು ಅವಕಾಶವಿಲ್ಲ, ಆಹಾರ ಮತ್ತು ನೀರು ಸರಿಯಾಗಿ ಕೊಡುತ್ತಿಲ್ಲ. ಇವು ಶ್ರಮಿಕ್ ರೈಲುಗಳೋ, ಕೊರೊನಾ ಎಕ್ಸ್ಪ್ರೆಸ್ ರೈಲುಗಳೋ' ಎಂದು ಮಮತಾ ಬ್ಯಾನರ್ಜಿ ವ್ಯಂಗ್ಯವಾಡಿದ್ದರು.
ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರದ ಸಂಸ್ಕೃತಿಯನ್ನೂ ಮಮತಾ ಬ್ಯಾನರ್ಜಿ ಬೆಳೆಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿರುವ ಭಯದ ವಾತಾವರಣ ತೊಲಗಿಸುವುದು ಬಿಜೆಪಿಯ ಗುರಿ ಎಂದು ಅಮಿತ್ ಶಾ ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.