ಅಮಿತ್ ಶಾ
(ಪಿಟಿಐ ಚಿತ್ರ)
ನವದೆಹಲಿ: ಸಂಸತ್ತಿನಲ್ಲಿ ಕಲಾಪವನ್ನು ಅಡ್ಡಿಪಡಿಸುವ ಮೂಲಕ ವಿರೋಧ ಪಕ್ಷಗಳು ಸಂಕುಚಿತ ರಾಜಕೀಯ ನಡೆ ಅನುಸರಿಸುತ್ತಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಸಮಾಧಾನ ಹೊರಹಾಕಿದ್ದಾರೆ.
'ಸಂಸತ್ ಹಾಗೂ ವಿಧಾನಸಭೆಯಲ್ಲಿ ಚರ್ಚೆಗಳು ನಡೆಯಬೇಕು. ಆದರೆ ಅಧಿವೇಶನ ನಡೆಯದಿರಲು ವಿರೋಧ ಪಕ್ಷಗಳು ನಿರಂತರ ಅಡ್ಡಿಯಾಗುತ್ತಿರುವುದು ಪ್ರಜಾಪ್ರಭುತ್ವದ ಪಾಲಿಗೆ ಉತ್ತಮವಲ್ಲ' ಎಂದಿದ್ದಾರೆ.
'ಸಂಸತ್ತಿನ ಮುಂಗಾರು ಅಧಿವೇಶನದ ಬಳಿಕ ನಡೆದ ಅಖಿಲ ಭಾರತ ಸ್ಪೀಕರ್ಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅಮಿತ್ ಶಾ, 'ಸಂಸತ್ನಲ್ಲಿ ಸೀಮಿತ ಮಾತ್ರಕ್ಕೆ ಚರ್ಚೆಗಳು ನಡೆದಾಗ ರಾಷ್ಟ್ರ ನಿರ್ಮಾಣದಲ್ಲಿ ಸದನದ ಕೊಡುಗೆಯ ಮೇಲೆ ಪರಿಣಾಮ ಬೀರುತ್ತದೆ' ಎಂದು ಹೇಳಿದ್ದಾರೆ.
'ಪ್ರಜಾಪ್ರಭುತ್ವದಲ್ಲಿ ಚರ್ಚೆಗಳು ನಡೆಯಬೇಕು. ಆದರೆ ಸಂಕುಚಿತ ರಾಜಕೀಯ ಲಾಭಕ್ಕಾಗಿ ಕಲಾಪ ನಡೆಯಲು ಬಿಡದಿದ್ದರೆ ಅದು ಒಳ್ಳೆಯದಲ್ಲ' ಎಂದಿದ್ದಾರೆ.
'ಈ ಕುರಿತು ದೇಶದ ಜನತೆ, ಚುನಾಯಿತ ಪ್ರತಿನಿಧಿಗಳು ಚಿಂತಿಸಬೇಕು' ಎಂದು ಅವರು ಹೇಳಿದ್ದಾರೆ.
ಸ್ಪೀಕರ್ ಅವರನ್ನು 'ರಕ್ಷಕ' ಹಾಗೂ 'ಸೇವಕ' ಎಂದು ಬಣ್ಣಿಸಿರುವ ಅಮಿತ್ ಶಾ, 'ಸದನದಲ್ಲಿ ಚರ್ಚೆಗಳು ಅರ್ಥಪೂರ್ಣವಾಗಿರಬೇಕು. ಸ್ಪೀಕರ್ ಹುದ್ದೆಯ ಘನತೆ ಹಾಗೂ ಗೌರವವನ್ನು ಹೆಚ್ಚಿಸುವ ಕೆಲಸವನ್ನು ಎಲ್ಲರೂ ಮಾಡಬೇಕು' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.