ADVERTISEMENT

ನೈಸರ್ಗಿಕ ವಿಕೋಪ: ಎಚ್ಚರಿಕೆ ಸಂದೇಶ ತಲುಪಲಿ- ಅಮಿತ್ ಶಾ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 15:29 IST
Last Updated 7 ಏಪ್ರಿಲ್ 2022, 15:29 IST

ನವದೆಹಲಿ: ನೈಸರ್ಗಿಕ ವಿಕೋಪದ ಮುನ್ಸೂಚನೆಯ ಕುರಿತು ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸಕಾಲಿಕವಾದ ಎಚ್ಚರಿಕೆ ಸಂದೇಶ ತಲುಪುವಂತೆ ವಿಪತ್ತು ನಿರ್ವಹಣಾ ಏಜೆನ್ಸಿಗಳು ನೋಡಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಸಲಹೆ ನೀಡಿದರು.

ವಿಪತ್ತು ಪ್ರತಿಕ್ರಿಯೆ ಸಾಮರ್ಥ್ಯ ನಿರ್ಮಾಣ ಕುರಿತು ಇಲ್ಲಿ ಏರ್ಪಡಿಸಿರುವ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಎನ್‌.ಸಿ.ಸಿ, ಗೃಹ ರಕ್ಷಕ ದಳ ಹಾಗೂ ಮಹಿಳಾ ಸ್ವ–ಸಹಾಯ ಗುಂಪುಗಳ ಸದಸ್ಯರು ವಿಪತ್ತು ನಿರ್ವಹಣೆ ಕಾರ್ಯಕ್ಕಾಗಿ ಬಳಕೆಯಾಗಬೇಕು ಎಂದು ತಿಳಿಸಿದರು.

ನೈಸರ್ಗಿಕ ವಿಕೋಪದಂತಹ ತುರ್ತು ಸಂದರ್ಭಗಳಲ್ಲಿ ಕಾರ್ಯಾಚರಣೆಗೆ ನೆರವಾಗುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್)ಯು ಈ ಸದಸ್ಯರಿಗೆ ತರಬೇತಿ ನೀಡಬೇಕು. ವೃತ್ತಿಪರ ರಕ್ಷಕರು ವಿಪತ್ತಿನ ಸ್ಥಳ ತಲುಪುವವರೆಗೆ ತರಬೇತಿ ಪಡೆದ ಸಿಬ್ಬಂದಿ ರಕ್ಷಣಾ ಕಾರ್ಯ ನಿರ್ವಹಿಸಲು ಇದರಿಂದ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

ಕೇಂದ್ರ ಮತ್ತು ರಾಜ್ಯ ವ್ಯಾಪ್ತಿಯ ವಿಪತ್ತು ನಿರ್ವಹಣಾ ಪಡೆಗಳ ಪ್ರತಿನಿಧಿಗಳು ಹಾಗೂ ಸಂಬಂಧಿತ ಏಜೆನ್ಸಿಗಳ ಮುಖ್ಯಸ್ಥರು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.