ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಸರ್ಕಾರ ರಚಿಸುವವರೆಗೆ ಬಿಜೆಪಿಗೆ ವಿಶ್ರಾಂತಿಯಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಸರ್ಕಾರವನ್ನು ಅಧಿಕಾರ ತೊರೆಯುವಂತೆ ಮಾಡುವುದು ಮತ್ತು ಬಿಜೆಪಿಯನ್ನು ಗಟ್ಟಿಗೊಳಿಸುವುದಷ್ಟೇ ನಮ್ಮ ಹೋರಾಟವಲ್ಲ. ಪಶ್ಚಿಮ ಬಂಗಾಳವನ್ನು ‘ಬಂಗಾರದ ರಾಜ್ಯ’ವನ್ನಾಗಿ ಮಾಡುವುದೂ ನಮ್ಮ ಗುರಿ’ ಎಂದು ಅವರು ಹೇಳಿದ್ದಾರೆ.
ಬಿಜೆಪಿಯ ಸಾಮಾಜಿಕ ಮಾಧ್ಯಮ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪೂರ್ವ ಭಾರತದ ವೈಭವವನ್ನು ಮರಳಿ ತರುವುದು, ಅಕ್ರಮ ವಲಸೆ ಸಮಸ್ಯೆ ನಿರ್ಮೂಲನೆ ಮಾಡುವ ಮೂಲಕ ದೇಶದ ಗಡಿಗಳನ್ನು ಭದ್ರಪಡಿಸುವುದು, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮೂಲಕ ನಿರಾಶ್ರಿತರಿಗೆ ಪೌರತ್ವ ನೀಡುವುದೂ ನಮ್ಮ ಹೋರಾಟವಾಗಿದೆ ಎಂದು ಹೇಳಿದ್ದಾರೆ.
‘ಬಿಜೆಪಿಯು ಪಶ್ಚಿಮ ಬಂಗಾಳದಲ್ಲಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ಸರ್ಕಾರ ರಚಿಸಲಿದೆ ಎಂಬ ವಿಶ್ವಾಸವಿದೆ’ ಎಂದೂ ಶಾ ಹೇಳಿದ್ದಾರೆ.
ತಾವು ಆಶಾವಾದಿ ವ್ಯಕ್ತಿಯಾಗಿದ್ದು, ತಮ್ಮ ಮಾತುಗಳು ದೇವರ ಅನುಗ್ರಹದಿಂದ ಆಗಾಗ ನಿಜವಾಗುತ್ತವೆ ಎಂದೂ ಶಾ ಹೇಳಿದ್ದಾರೆ.
ಏಪ್ರಿಲ್-ಮೇನಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರತಿಯೊಬ್ಬ ಮತದಾರನೂ ಮುಕ್ತವಾಗಿ ಮತ ಚಲಾಯಿಸಬಹುದು. ಇದನ್ನು ಖಾತರಿಪಡಿಸಿಕೊಳ್ಳಲಾಗುವುದು ಎಂದೂ ಕೇಂದ್ರ ಗೃಹ ಸಚಿವರು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಸಾಧನೆಗಳು, ಪಕ್ಷದ ಸಂದೇಶಗಳನ್ನು ಪಶ್ಚಿಮ ಬಂಗಾಳದ 10 ಕೋಟಿ ಜನತೆಯ ಪೈಕಿ 2 ಕೋಟಿ ಮಂದಿಗೆ ತಲುಪಿಸುವ ಗುರಿಯನ್ನು ಅವರು ಬಿಜೆಪಿ ಸಾಮಾಜಿಕ ಮಾಧ್ಯಮ ಕಾರ್ಯಕರ್ತರಿಗೆ ನಿಗದಿಪಡಿಸಿದ್ದಾರೆ. ಹೀಗೆ ಮಾಡುವುದರಿಂದ ಕೇಂದ್ರ ಸರ್ಕಾರದ ಸಾಧನೆಗಳು, ಪಕ್ಷದ ಸಂದೇಶಗಳು ಸಾಮಾಜಿಕ ಮಾಧ್ಯಮಗಳ ಮೂಲಕ ರಾಜ್ಯದ ಬಹುತೇಕ ಎಲ್ಲಾ ಕುಟುಂಬಗಳನ್ನು ತಲುಪಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.