ADVERTISEMENT

ಹಿಂದುತ್ವವೇ ಪ್ರಧಾನ ಕಾರ್ಯಸೂಚಿ: ಅಮಿತ್ ಶಾ ಸುಳಿವು

ಮುಂದಿನ ವರ್ಷ ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 14:39 IST
Last Updated 1 ಆಗಸ್ಟ್ 2021, 14:39 IST
ಅಮಿತ್ ಶಾ
ಅಮಿತ್ ಶಾ   

ಲಖನೌ: ಮುಂದಿನ ವರ್ಷ ಉತ್ತರ ಪ್ರದೇಶ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಹಿಂದುತ್ವವೇ ಪಕ್ಷದ ಪ್ರಧಾನ ಕಾರ್ಯಸೂಚಿಯಾಗಿರಲಿದೆ ಎಂಬ ಸುಳಿವನ್ನು ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿಯ ಮಾಜಿ ಅಧ್ಯಕ್ಷ ಅಮಿತ್‌ ಶಾ ಭಾನುವಾರ ನೀಡಿದ್ದಾರೆ.

ಲಖನೌದಲ್ಲಿ ಇನ್ಸ್‌ಟಿಟ್ಯೂಟ್‌ ಆಫ್‌ ಫೋರೆನ್ಸಿಕ್‌ ಸೈನ್ಸ್‌, ಮಿರ್ಜಾಪುರದಲ್ಲಿ ವಿಂಧ್ಯವಾಸಿನಿ ಕಾರಿಡಾರ್‌ಗೆ ಶಿಲಾನ್ಯಾಸ ನೆರವೇರಿಸಿದ ನಂತರ ನಡೆದ ಕಾರ್ಯಕ್ರಮಗಳಲ್ಲಿನ ಅವರ ಭಾಷಣದಲ್ಲಿ, ರಾಜ್ಯದ ಪ್ರಮುಖ ಧಾರ್ಮಿಕ ತಾಣಗಳ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಕೈಗೊಂಡ ಕ್ರಮಗಳನ್ನೇ ಪ್ರಸ್ತಾಪಿಸಿದ್ದು ಈ ಮಾತಿಗೆ ಪುಷ್ಟಿ ನೀಡುವಂತಿತ್ತು.

‘ರಾಮ ಮಂದಿರಕ್ಕೆ ಸಂಬಂಧಿಸಿ, ಬಿಜೆಪಿ ತಾನು ನೀಡಿದ್ದ ಭರವಸೆಯನ್ನು ಈಡೇರಿಸಿದೆ. ಅಯೋಧ್ಯೆಯಲ್ಲಿ ಶೀಘ್ರವೇ ಭವ್ಯ ರಾಮಮಂದಿರ ನಿರ್ಮಾಣವಾಗಲಿದೆ. ಈ ಉದ್ದೇಶಕ್ಕಾಗಿ ಕಳೆದ 500 ವರ್ಷಗಳಿಂದ ನಾವು ಹೋರಾಟ ಮಾಡುತ್ತಿದ್ದೆವು’ ಎಂದು ಮಿರ್ಜಾಪುರದಲ್ಲಿ ಹೇಳಿದರು.

ADVERTISEMENT

‘ಕೃಷ್ಣನ ಆರಾಧಕರಿಗೆ ಪವಿತ್ರ ಸ್ಥಳವಾದ ಬ್ರಿಜಭೂಮಿ, ರಾಮ ಚಿತ್ರಕೂಟದಲ್ಲಿ ಹಲವು ವರ್ಷಗಳನ್ನು ಕಳೆದಿದ್ದು, ಇದರ ಅಭಿವೃದ್ಧಿಗೆ ಹಿಂದಿನ ಸರ್ಕಾರಗಳು ಏಕೆ ಕ್ರಮಕೈಗೊಳ್ಳಲಿಲ್ಲ’ ಎಂದೂ ಅವರು ಪ್ರಶ್ನಿಸಿದರು.

‘ಹಿಂದಿನ ಸರ್ಕಾರಗಳು ಮತಬ್ಯಾಂಕ್‌ ರಾಜಕಾರಣವನ್ನೇ ಮಾಡಿದವು ಹೊರತಾಗಿ, ಹಿಂದೂ ಧಾರ್ಮಿಕ ತಾಣಗಳತ್ತ ಗಮನ ಹರಿಸಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.