ADVERTISEMENT

ದೇಶಭಕ್ತಿ ಭಾವನೆ ಪಸರಿಸಲು ನಾಲ್ಕು ದಿನ ಮೀಸಲಿಡಿ: ಕಾರ್ಯಕರ್ತರಿಗೆ ಅಮಿತ್ ಶಾ

ಏಜೆನ್ಸೀಸ್
Published 1 ಆಗಸ್ಟ್ 2022, 4:07 IST
Last Updated 1 ಆಗಸ್ಟ್ 2022, 4:07 IST
ಅಮಿತ್ ಶಾ – ಐಎಎನ್‌ಎಸ್ ಚಿತ್ರ
ಅಮಿತ್ ಶಾ – ಐಎಎನ್‌ಎಸ್ ಚಿತ್ರ   

ಪಟ್ನಾ: ದೇಶಭಕ್ತಿ ಭಾವನೆಯನ್ನು ಜನರಲ್ಲಿ ಪಸರಿಸುವುದಕ್ಕಾಗಿ ನಾಲ್ಕು ದಿನಗಳನ್ನು ಮೀಸಲಿಡಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದ್ದಾರೆ. ಸ್ವಾತಂತ್ರ್ಯೋತ್ಸವ ಪ್ರಯುಕ್ತ ಅವರು ಈ ಮನವಿ ಮಾಡಿದ್ದಾರೆ.

ಪಕ್ಷದ ಜಂಟಿ ರಾಷ್ಟ್ರೀಯ ಕಾರ್ಯಕಾರಿ ಸಭೆಯ ಸಮಾರೋಪದ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ.

‘ಆಗಸ್ಟ್ 9ರಿಂದ 12ರ ವರೆಗೆ ನಾಲ್ಕು ದಿನಗಳನ್ನು ದೇಶಭಕ್ತಿಯ ಭಾವನೆಯನ್ನು ಜನರಲ್ಲಿ ಹರಡುವುದಕ್ಕಾಗಿ ಮೀಸಲಿಡಿ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಈ ಕೆಲಸ ಮಾಡಿ’ ಎಂದು ಅವರು ಕರೆ ನೀಡಿದ್ದಾರೆ.

ಕೇಂದ್ರ ಸರ್ಕಾರವು ದಲಿತರಿಗೆ, ಬುಡಕಟ್ಟು ಜನರಿಗೆ, ಒಬಿಸಿ ವರ್ಗದವರಿಗೆ ಹಾಗೂ ಇತರ ದುರ್ಬಲ ವರ್ಗದವರಿಗಾಗಿ ಮಾಡಿರುವ ಕೆಲಸಗಳನ್ನು ಬೂತ್ ಮಟ್ಟದಲ್ಲಿ ಜನರನ್ನು ಭೇಟಿಮಾಡಿ ಮನವರಿಕೆ ಮಾಡಿಕೊಡಬೇಕು ಎಂದೂ ಕಾರ್ಯಕರ್ತರಿಗೆ ಶಾ ಸೂಚಿಸಿದ್ದಾರೆ.

2024ರಲ್ಲಿ ಮತ್ತೆ ನರೇಂದ್ರ ಮೋದಿ ಅವರಿಗೆ ಅಧಿಕಾರ ದೊರೆಯುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದೂ ಅವರು ಕಾರ್ಯಕರ್ತರಿಗೆ ಹೇಳಿದ್ದಾರೆ.

ಜಂಟಿ ರಾಷ್ಟ್ರೀಯ ಕಾರ್ಯಕಾರಿ ಸಭೆಯ ಸಮಾರೋಪದ ಬಳಿಕ ಮಾತನಾಡಿದ್ದ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸಹ ಇದೇ ಮಾತುಗಳನ್ನಾಡಿದ್ದರು. ಬಿಹಾರದಲ್ಲಿ 2024ರ ಲೋಕಸಭೆ ಚುನಾವಣೆ ಹಾಗೂ 2025ರ ವಿಧಾನಸಭೆ ಚುನಾವಣೆಯನ್ನು ಬಿಜೆಪಿಯು ಈಗಿನ ಮೈತ್ರಿಯೊಂದಿಗೇ ಎದುರಿಸಲಿದೆ ಎಂದೂ ಅವರು ಸ್ಪಷ್ಟಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.