ತಿರುವನಂತಪುರ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ನಡುವಿನ ಸಂಘರ್ಷ ಮತ್ತೊಂದು ಹಂತ ತಲುಪಿದೆ. ವಿಜಯನ್ ಅವರು ಸಂಪ್ರದಾಯ ಮುರಿದಿದ್ದಾರೆ, ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ದೂರಿ ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅವರು ಪತ್ರ ಬರೆದಿದ್ದಾರೆ.
ವಿಜಯನ್ ಅವರು ಕಳೆದ ತಿಂಗಳು ಯುರೋಪ್ ಪ್ರವಾಸಕ್ಕೆ ಹೋಗಿದ್ದರು. ಆದರೆ, ಅಧಿಕೃತವಾಗಿ ನನಗೆ ತಿಳಿಸಿರಲೇ ಇಲ್ಲ. ಪ್ರವಾಸದಿಂದ ಹಿಂದಿರುಗಿದ ನಂತರವೂ ಅವರು ನನ್ನನ್ನು ಸಂಪರ್ಕಿಸಲಿಲ್ಲ ಎಂದು ಖಾನ್ ದೂರಿದ್ದಾರೆ.
ಆದರೆ, ಸಿಪಿಐ-ಎಂ ಪಾಲಿಟ್ಬ್ಯೂರೋ ಸದಸ್ಯ ಕೊಡಿಯೇರಿ ಬಾಲಕೃಷ್ಣನ್ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ವೇಳೆ ವಿಜಯನ್ ಅವರು ಪ್ರವಾಸದ ವಿಚಾರವನ್ನು ರಾಜ್ಯಪಾಲ ಖಾನ್ ಅವರಿಗೆ ಮೌಖಿಕವಾಗಿ ತಿಳಿಸಿದ್ದರು ಎನ್ನಲಾಗಿದೆ.
ನಂತರ, ವಿಜಯನ್ ನಾರ್ವೆಗೆ ಪ್ರಯಾಣ ಬೆಳೆಸಿದ್ದರು. 10 ದಿನಗಳ ನಂತರ ಹಿಂತಿರುಗಿದ್ದರು.
ವಿಜಯನ್ ಅವರ ವಿರುದ್ಧ ಗುರುವಾರವೂ ಹರಿಹಾಯ್ದಿರುವ ಖಾನ್, ಮುಖ್ಯಮಂತ್ರಿಗಳ ಕಚೇರಿ ಚಿನ್ನದ ಕಳ್ಳಸಾಗಣೆಯಲ್ಲಿ ತೊಡಗಿದ್ದರೆ ಮಧ್ಯಪ್ರವೇಶಿಸುವುದಾಗಿ ಎಚ್ಚರಿಸಿದ್ದಾರೆ. ಕಾನೂನು ಪಾಲಿಸುವುದು ನನ್ನ ಕರ್ತವ್ಯ ಎಂದು ಅವರು ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.