
ಕರ್ನೂಲ್: ‘ಬಸ್ಗೆ ಬೆಂಕಿ ಹತ್ತುತ್ತಿದ್ದಂತೆ ಚಾಲಕ ಲಕ್ಷ್ಮಯ್ಯ ಪ್ರಯಾಣಿಕರ ಬಾಗಿಲಿನಿಂದ ಹೊರಗೆ ಹಾರಿ ತಪ್ಪಿಸಿಕೊಂಡಿದ್ದಾನೆ. ಪರಿಸ್ಥಿತಿಯನ್ನು ಅವಲೋಕಿಸುವಲ್ಲಿ ಆತ ವಿಫಲನಾಗಿದ್ದಾನೆ...’ ಎಂದು ‘ಕರ್ನೂಲ್ ಬಸ್ ದುರಂತ’ದ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಾಂತ್ ಪಾಟೀಲ್ ಸುದ್ದಿಸಂಸ್ಥೆ ಪಿಟಿಐ ಜೊತೆ ಮಾತನಾಡಿದ್ದಾರೆ.
‘ಕೆಳಗೆ ಇಳಿದವನೇ ಬಸ್ನ ಕೆಳಗೆ ಮುಂದಿನ ಚಕ್ರ ಮತ್ತು ಹಿಂದಿನ ಚಕ್ರದ ನಡುವೆ ಇರುವ ಲಗೇಜ್ ರ್ಯಾಕ್ನಲ್ಲಿ ಮಲಗಿದ್ದ ಸಹ ಚಾಲಕನನ್ನು ಎಬ್ಬಿಸಿದ್ದಾನೆ’ ಎಂದು ಅವರು ತಿಳಿಸಿದ್ದಾರೆ.
ಹೈದರಾಬಾದ್ನಿಂದ ಬೆಂಗಳೂರಿಗೆ ಹೊರಟಿದ್ದ ವಿ.ಕಾವೇರಿ ಟ್ರಾವೆಲ್ಸ್ಗೆ ಸೇರಿದ ಬಸ್ಸೊಂದು ಶುಕ್ರವಾರ ಬೆಳಗಿನ ಜಾವ ಕರ್ನೂಲ್ ಜಿಲ್ಲೆಯ ಚಿನ್ನತೇಕೂರು ಗ್ರಾಮದ ಬಳಿ ಹೊತ್ತಿ ಉರಿದಿತ್ತು. ದುರಂತದಲ್ಲಿ 20 ಜನರು ಸಜೀವ ದಹನಗೊಂಡಿದ್ದರು.
‘ಬೆಂಕಿಯಿಂದ ಹೊತ್ತಿ ಉರಿಯುತ್ತಿರುವ ವಾಹನದೊಳಗೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಅರಿತ ಇಬ್ಬರು, ಟೈರ್ ಬದಲಾಯಿಸಲು ಬಳಸುವ ರಾಡ್ನಿಂದ ಕಿಟಕಿ ಗಾಜುಗಳನ್ನು ಒಡೆದಿದ್ದಾರೆ. ಇದರಿಂದ ಕೆಲ ಪ್ರಯಾಣಿಕರು ಬೆಂಕಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು’ ಎಂದು ಪಾಟೀಲ್ ಹೇಳಿದ್ದಾರೆ.
‘ಅದೇ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಇತರರು ವಾಹನ ನಿಲ್ಲಿಸಿ ಬಸ್ನ ಗಾಜು ಒಡೆದಿದ್ದಾರೆ. ಬಸ್ನ ಒಳಗಿದ್ದ ಪ್ರಯಾಣಿಕರೂ ಗಾಜು ಒಡೆದು ಹೊರಗೆ ಬಂದಿದ್ದಾರೆ’ ಎಂದು ಹೇಳಿದ್ದಾರೆ.
ಅದಾಗ್ಯೂ, ಬೆಂಕಿ ಇಡೀ ಬಸ್ಗೆ ಆವರಿಸಿ ಕೆಲ ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಇದರಿಂದ ಭಯಭೀತನಾದ ಲಕ್ಷ್ಮಯ್ಯ ಸ್ಥಳದಿಂದ ಪಲಾಯನ ಮಾಡಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.
ಶುಕ್ರವಾರ ಮಧ್ಯಾಹ್ನ ಕರ್ನೂಲ್ನಿಂದ ಲಕ್ಷ್ಮಯ್ಯನನ್ನು ವಶಕ್ಕೆ ಪಡೆಯಲಾಗಿದೆ. ಈ ದುರಂತಕ್ಕೆ ಆತನನ್ನೇ ಹೊಣೆಗಾರನನ್ನಾಗಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಲಕ್ಷ್ಮಯ್ಯ ವಿರುದ್ಧ ಉಳಿಂದಕೊಂಡ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಕಾಯ್ದೆಯ ಸೆಕ್ಷನ್ 125 (ಎ) (ಮಾನವ ಜೀವಕ್ಕೆ ಅಪಾಯವನ್ನುಂಟುಮಾಡುವುದು) ಮತ್ತು 106 (1) (ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವುದು) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮುಂದಿದ್ದ ಬೈಕ್ಅನ್ನು ಹಿಂದಿಕ್ಕಲು ಯತ್ನಿಸಿದಾಗ ಬೈಕ್ಗೆ ಬಸ್ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬಸ್ ಅಡಿಗೆ ಸಿಲುಕಿದ್ದ ಬೈಕ್ನ ಇಂಧನ ಟ್ಯಾಂಕ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಅಪಘಾತದಲ್ಲಿ ಬಸ್ನಲ್ಲಿದ್ದ 44 ಜನರ ಪೈಕಿ 19 ಜನರು ಸಜೀವ ದಹನಗೊಂಡರೆ, ಘಟನೆಯಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾನೆ.
ಸದ್ಯ, ಚಾಲಕ ಲಕ್ಷ್ಮಯ್ಯ ಮತ್ತು ಸಹ ಚಾಲಕ ಪೊಲೀಸ್ ವಶದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.